ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿರುವ ಜೆರಾಕ್ಸ್ ಅಂಗಡಿಯೊಂದರಲ್ಲಿ ನಡೆದ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳು ಲಭ್ಯವಾಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಭಾರೀ ರಾಜಕೀಯ ಹಾಗೂ ಸಾರ್ವಜನಿಕ ವಿವಾದಕ್ಕೆ ಕಾರಣವಾಗಿದ್ದ ಈ ಘಟನೆಯ ಅಸಲಿಯತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಾಖಲೆ ಪತ್ರಗಳ ಜೆರಾಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲಕರು ಹಾಗೂ ಬಂದಿದ್ದ ಗ್ರಾಹಕರ ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿದೆ. ಈ ವಾಗ್ವಾದದ ನಡುವೆ ಗ್ರಾಹಕರೊಬ್ಬರು ತಮ್ಮ ಮೊಬೈಲ್ ಫೋನ್ ಮೂಲಕ ಘಟನೆಯನ್ನು ಚಿತ್ರೀಕರಿಸಲು ಮುಂದಾಗಿದ್ದಾರೆ.
ಇದನ್ನು ಗಮನಿಸಿದ ಅಂಗಡಿ ಮಾಲಕಿ ಅಂಜನಾ ಪೈ ಅವರು ಮೊಬೈಲ್ ವಿಡಿಯೋ ಮಾಡುವುದನ್ನು ತಡೆದಿದ್ದಾರೆ. ಇದರಿಂದ ಕೆರಳಿದ ಅಂಜನಾ ಪೈ ಅವರ ಪುತ್ರ ಸುದರ್ಶನ ಪೈ ತಕ್ಷಣವೇ ಗ್ರಾಹಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತದನಂತರ ಎರಡೂ ಕಡೆಯವರ ನಡುವೆ ತೀವ್ರ ನೂಕಾಟ-ತಳ್ಳಾಟ ಹಾಗೂ ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ.
ಪ್ರಕರಣವು ಈಗಾಗಲೇ ದಕ್ಷಿಣ ಕನ್ನಡದಲ್ಲಿ ವಿವಾದವಾಗಿ ರೂಪುಗೊಂಡಿದ್ದು, ಪರ-ವಿರೋಧದ ಆರೋಪಗಳು ಕೇಳಿಬರುತ್ತಿದ್ದವು. ಇದೀಗ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿರುವುದರಿಂದ ಪೊಲೀಸರಿಗೆ ತನಿಖೆಯನ್ನು ನಿಖರವಾಗಿ ಮುನ್ನಡೆಸಲು ಪ್ರಮುಖ ಸಾಕ್ಷಿ ಲಭಿಸಿದಂತಾಗಿದೆ.


















