ಸಮಗ್ರ ನ್ಯೂಸ್: ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿಯಲ್ಲಿ ಎ.7ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಬುಧವಾರ ಸಂಜೆ ವೇಳೆ ಧಾರಕಾರ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಐನೆಕಿದು, ಕಲ್ಮಕಾರು, ಯೇನೆಕಲ್ಲು, ಸಂಪಾಜೆ ಸೇರಿದಂತೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಸಾಧಾರಣದಿಂದ ಧಾರಕಾರ ಮಳೆಯಾಯಿತು.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆ ಹಲವೆಡೆ ಗುಡುಗು ಆರಂಭಗೊಂಡಿದ್ದು ಬಳಿಕ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ವಿಪರೀತ ಉರಿ ಬಿಸಿಲು ಮತ್ತು ಉರಿ ಸೆಕೆಯ ವಾತಾವರಣ ಇತ್ತು. ಇದೀಗ ವರುಣಾಗಮನದಿಂದ ಬಿಸಿಲ ಬೇಗೆಗೆ ಬೆಂದು ಬರಡಾಗಿದ್ದ ಇಳೆಗೆ ತಂಪೆರೆದಂತಾಗಿದೆ.
ಕರ್ನಾಟಕದಲ್ಲಿ ಏಪ್ರಿಲ್ 12 ರಿಂದ 20ರವರೆಗೆ ಸಾಧಾರಣ ಅಥವಾ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ.. ಕರ್ನಾಟಕದ ವಿವಿಧ ಭಾಗದಲ್ಲಿ ಏಪ್ರಿಲ್ನಲ್ಲಿ ಮಳೆಯಾಗಲಿದ್ದು ಜನರು ಎಚ್ಚರಿಕೆಯಿಂದ ಇರುವಂತೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚಿಸಿದೆ.
ರಾಜ್ಯದ ದಕ್ಷಿಣ ಕನ್ನಡದ ಪೂರ್ವ ಭಾಗದ ಪ್ರಾಂತ್ಯಗಳು, ರಾಮನಗರ, ಕುಣಿಗಲ್ ಮಳೆಯಾಗುವ ಸಾಧ್ಯತೆ ಇದೆ.. ತುಮಕೂರು ಜಿಲ್ಲೆಯ ಪಶ್ಚಿಮ ಭಾಗದ ಪ್ರದೇಶಗಳಾದ ಗುಬ್ಬಿ, ಚಿಕ್ಕನಾಯಕನ ಹಳ್ಳಿ, ಕುಣಿಗಲ್, ಚಿತ್ರದುರ್ಗದ ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರಿನಲ್ಲೂ ವರುಣ ಆರ್ಭಟಿಸಲಿದ್ದಾನೆ. ಬಳ್ಳಾರಿಯ ಕೂಡ್ಲಿಗಿ, ಸಂಡೂರು, ಕೊಪ್ಪಳ ಜಿಲ್ಲೆಯ ಕುಕನೂರು, ಯಲಬುರ್ಗಾ, ಗಜೇಂದ್ರಗಡ, ಕುಷ್ಟಗಿ ಬಾಗಲಕೋಟೆಯ ಗುಳೇದ ಗುಡ್ಡ, ಹುನಗುಂದಲ್ಲಿ ಮಳೆಬೀಳಲಿದೆ.
ಇನ್ನೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಾಗೇವಾಡಿ, ತಾಳಿಕೋಟೆ, ದೇವರ ಹಿಪ್ಪರಗಿ, ಸಿಂದಗಿ, ಇಂಡಿ, ಚಡಚಣ. ಕಲಬುರಗಿ ಜಿಲ್ಲೆಯ ಚಿತ್ತಾಪುರ, ಜೇವರ್ಗಿ, ಅಫ್ಜಜಲ್ಪುರ, ಕಮಲಾಪುರ, ಸೇಡಂ, ಚಿಂಚೋಳಿ ಹಾಗೂ ಸುತ್ತಲಿನ ಪ್ರಾಂತ್ಯಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.


















