ಸಮಗ್ರ ನ್ಯೂಸ್: ಚಾಮರಾಜನಗರದ ಹನೂರು ಎನ್ಕೌಂಟರ್ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ಅರಣ್ಯ ಇಲಾಖೆಯ ಮತ್ತೊಂದು ನಿರ್ಲಕ್ಷ್ಯದ ಘಟನೆ ದಕ್ಷಿಣ ಕನ್ನಡದಲ್ಲಿ ಬೆಳಕಿಗೆ ಬಂದಿದೆ. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೆಂಗಮಲೆಯಲ್ಲಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಇಬ್ಬರು ಬೈಕ್ ಸವಾರರು ಅಪಾಯಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ನಡೆದ ಘಟನೆಯಲ್ಲಿ ರಾಘವ ಪ್ರಭು ಎಂಬುವರ ಕಾಲಿಗೆ ಗುಂಡು ತಗುಲಿ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅರಣ್ಯ ಅಧಿಕಾರಿಗಳು ಚಿಕಿತ್ಸಾ ವೆಚ್ಚ ಭರಿಸಿ ರಾಜಿ ಮಾತುಕತೆಗೆ ಮುಂದಾದ ಹಿನ್ನೆಲೆಯಲ್ಲಿ ಪೊಲೀಸ್ ದೂರು ನೀಡಿಲ್ಲ ಎನ್ನಲಾಗಿದೆ.
ಇದೇ ವೇಳೆ ಧನರಾಜ್ ಎಂಬುವರ ಶರ್ಟ್ ಜೇಬಿನಲ್ಲಿದ್ದ ಮೊಬೈಲ್ಗೆ ಗುಂಡು ಬಡಿದಿದೆ. ಮೊಬೈಲ್ ಹಾನಿಗೊಳಗಾದರೂ, ಗುಂಡು ಎದೆಗೆ ತಾಗದೆ ಅವರ ಜೀವ ಉಳಿದಿದೆ. ಈ ಘಟನೆ ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆಯ ಸುರಕ್ಷತೆ ಬಗ್ಗೆ ಸ್ಥಳೀಯರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

















