ಸಮಗ್ರ ನ್ಯೂಸ್: ಸ್ಯಾಂಡಲ್ವುಡ್ನ ಜನಪ್ರಿಯ ನಟಿ ರಚಿತಾ ರಾಮ್ ಅವರು ತುಳುನಾಡಿನ ಆರಾಧ್ಯ ಹಾಗೂ ಕಾರಣಿಕ ದೈವವಾದ ಶ್ರೀ ಕೊರಗಜ್ಜ ದೈವಕ್ಕೆ ಹರಕೆ ಕೋಲ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಯಲ್ಲಿ ಈ ವಿಶೇಷ ಧಾರ್ಮಿಕ ಸೇವೆ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿದೆ.
ತಾವು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾಗಿ 14 ವರ್ಷ ಪೂರೈಸಿದ ಸವಿನೆನಪು ಹಾಗೂ ತಾವು ಅಂದುಕೊಂಡಿದ್ದ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ, ನಟಿ ರಚಿತಾ ರಾಮ್ ಅವರು ಈ ಹಿಂದೆ ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವ ಹರಕೆ ಹೊತ್ತಿದ್ದರು.
ಯಾವುದೇ ಪೂರ್ವ ಪ್ರಚಾರ ಅಥವಾ ಹಂಗಾಮಾ ಇಲ್ಲದೆ, ಕೇವಲ ಕುಟುಂಬದ ಆಪ್ತರು ಹಾಗೂ ಕ್ಷೇತ್ರದ ಪ್ರಮುಖರ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ಈ ಹರಕೆ ಕೋಲವನ್ನು ನೆರವೇರಿಸಲಾಗಿದೆ.
ಕೋಲ ಸೇವೆಯ ಜೊತೆಗೆ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಕೂಡ ನಟಿಯ ಕಡೆಯಿಂದ ಆಯೋಜಿಸಲಾಗಿತ್ತು. ಸದ್ಯ ರಚಿತಾ ರಾಮ್ ಅವರು ಅತ್ಯಂತ ನಿಷ್ಠೆಯಿಂದ ದೈವದ ಮುಂದೆ ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.


















