ಮಂಗಳೂರು: ತನ್ನ ಮೂವರು ಮಕ್ಕಳ ಕೊಂದ ಪಾಪಿಗೆ ಶಿಕ್ಷೆ ಪ್ರಕಟ

ಸಮಗ್ರ ನ್ಯೂಸ್: ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಹಾಗೂ ಪತ್ನಿಯನ್ನೂ ಬಾವಿಗೆ ದೂಡಿ ಕೊಲ್ಲಲು ಯತ್ನಿಸಿದ್ದ ಪ್ರಕರಣದಲ್ಲಿ ಮಂಗಳೂರು ತಾಲ್ಲೂಕಿನ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ಮನೆಯ ಹಿತೇಶ್‌ ಶೆಟ್ಟಿಗಾರ್‌ಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಮರಣ ದಂಡನೆ ಶಿಕ್ಷೆಯನ್ನು ಮಂಗಳವಾರ ವಿಧಿಸಿದೆ.

Ad Widget ... ..

ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ 2022ರ ಜೂನ್ 23ರಂದು ಸಂಜೆ 5:15ಕ್ಕೆ ಹಿತೇಶ್ ಶೆಟ್ಟಿಗಾರ್ ತನ್ನ ಮಕ್ಕಳಾದ ರಶ್ಮೀತಾ (13), ಉದಯ ಕುಮಾರ (11), ದಕ್ಷೀತ್ (5) ಎಂಬವರನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ್ದಲ್ಲದೆ ತನ್ನ ಪತ್ನಿ ಲಕ್ಷ್ಮಿ ಎಂಬವರನ್ನು ಬಾವಿಗೆ ದೂಡಿಹಾಕಿ ಕೊಲೆಗೆ ಯತ್ನಿಸಿದ್ದ.

Ad Widget

ಆರೋಪಿಯು ಯಾವುದೇ ಕೆಲಸ ಮಾಡದೆ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದು, ಅದೇ ದ್ವೇಷದಿಂದ ಆಗಷ್ಟೆ ಶಾಲೆಯಿಂದ ಬಂದಿದ್ದ ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿಹಾಕಿ ಕೊಲೆ ಮಾಡಿದ್ದ. ಸಂಜೆ ಹೊಟೇಲಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ತನ್ನ ಹೆಂಡತಿಯನ್ನು ಕೂಡ ಕೊಲೆ ಮಾಡುವ ಉದ್ದೇಶದಿಂದ ಮನೆಯ ಪಕ್ಕದ ಬಾವಿಗೆ ದೂಡಿ ಹಾಕಿದ್ದ. ಲಕ್ಷ್ಮಿಯ ಬೊಬ್ಬೆ ಕೇಳಿ ರಸ್ತೆ ಬದಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಬಾವಿಗೆ ಇಳಿದು ಲಕ್ಷ್ಮಿಯವರನ್ನು ರಕ್ಷಿಸಿದ್ದರು. ಮಕ್ಕಳನ್ನು ಬಾವಿಗೆ ಹಾಕಿದ ವೇಳೆ ಹಿರಿಯ ಮಗಳು ರಶ್ಮೀತಾ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪನ್ನು ಹಿಡಿದುಕೊಂಡಿರುವುದ್ದನ್ನು ಕಂಡ ಆರೋಪಿ ಹಿತೇಶ್ ಶೆಟ್ಟಿಗಾರ್ ಕತ್ತಿಯಿಂದ ಪೈಪನ್ನು ತುಂಡರಿಸಿದ್ದ.

ಘಟನೆಯ ಬಗ್ಗೆ ಲಕ್ಷ್ಮಿ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಕುಸುಮಾಧರ ತನಿಖೆ ನಡೆಸಿ ಅರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಎಎಸ್ಸೈ ಸಂಜೀವ ತನಿಖೆಗೆ ಸಹಕರಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕ ಮೋಹನ ಕುಮಾರ್ ವಾದ ಮಂಡಿಸಿದ್ದರು.

ಆರೋಪಿಯು ಕೊಲೆ ಹಾಗೂ ಕೊಲೆಯತ್ನ ನಡೆಸಿರುವುದು ಸಾಬೀತಾಗಿರುವುದಾಗಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಆರೋಪಿಗೆ ಮರಣ ದಂಡನೆ ವಿಧಿಸಿರುತ್ತಾರೆ.

Leave a Comment

Your email address will not be published. Required fields are marked *