ಕರಾವಳಿಯನ್ನು ಬೆಚ್ಚಿಬೀಳಿಸಿದ ಸೌಮ್ಯ ಭಟ್ ಕೊಲೆಗೆ 27 ವರ್ಷ| ಇನ್ನೂ ಪತ್ತೆಯಾಗಿಲ್ಲ ಮಿಲಿಟ್ರಿ ಅಶ್ರಫ್

ಸಮಗ್ರ ನ್ಯೂಸ್: ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಪುತ್ತೂರಿನ ವಿದ್ಯಾರ್ಥಿನಿ ಸೌಮ್ಯಾ ಭಟ್‌ ಕೊಲೆ ಪ್ರಕರಣ ನಡೆದು 27 ವರ್ಷ ತುಂಬಿದೆ ಆದರೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಆರೋಪಿ ಮಿಲಿಟ್ರಿ ಅಶ್ರಫ್ ಸುಳಿವು ಇನ್ನೂ ಪತ್ತೆಯಾಗಿಲ್ಲ.

Ad Widget ... ..

ದಕ್ಷಿಣ ಕನ್ನಡದ ಪುತ್ತೂರು ವಿವೇಕಾನಂದ ಕಾಲೇಜಿನ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಸೌಮ್ಯಾ ಭಟ್‌ ಅವರನ್ನು ಹಿಂಬಾಲಿಸಿ ಕುದಂಬ್ಲಾಜೆಯ ಮಿಲಿಟ್ರಿ ಅಶ್ರಫ್‌ ಬರ್ಬರವಾಗಿ ಕೊಲೆಗೈದಿದ್ದ ಆ ಘಟನೆ ಇಡೀ ಪುತ್ತೂರು ಕೆರಳಿ ಕೆಂಡದಂತೆ ಮಾಡಿತ್ತು.

Ad Widget

ಅದು 1997ರ ಆಗಸ್ಟ್‌ 7 ರಂದು ಸಂಜೆ 5ರ ಸಮಯ ಕಾಲೇಜು ಮುಗಿಸಿ ಬಸ್‌ನಲ್ಲಿ ಬಂದು ಕಬಕದಲ್ಲಿ ಇಳಿದ ಸೌಮ್ಯಾ ತನ್ನ ಮನೆಗೆ ಕೆದಿಲಕ್ಕೆ ಹೋಗುವ ಒಳ ರಸ್ತೆಯಲ್ಲಿ ರೈಲ್ವೇ ಹಳಿಯನ್ನು ದಾಟಿ ಹೋಗುತ್ತಿದ್ದರು. ಅದು ನಿರ್ಜನ ಪ್ರದೇಶ. ಅಷ್ಟೇ ಅಲ್ಲ ಸಂಜೆಯ ವೇಳೆ ಆಗಿದ್ದ ಕಾರಣ ಕತ್ತಲು ಕೂಡ ಆವರಿಸಿತ್ತು. ಸೌಮ್ಯಾಳನ್ನು ಕಬಕದಿಂದ ಹಿಂಬಾಲಿಸಿದ್ದ ಆರೋಪಿ ನಿರ್ಜನ ದಾರಿಯಲ್ಲಿ ಆಕೆಗೆ ಅಡ್ಡವಾಗಿ ನಿಂತಿದ್ದ. ಆಕೆಯ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ.

ಈ ವೇಳೆ ಅವನಿಂದ ತಪ್ಪಿಸಿಕೊಂಡ ಸೌಮ್ಯಾ ಅಲ್ಲಿಂದ ಓಡಿದ್ದಾರೆ. ಆದ್ರೆ ಆಲದಗುಂಡಿ ಬಳಿ ಆಕೆಯನ್ನು ಬೆನ್ನತ್ತಿ ಬಂದ ಅಶ್ರಫ್‌ ಚಾಕುವಿನಿಂದ ಮನಬಂದಂತೆ 20 ಕ್ಕೂ ಅಧಿಕ ಬಾರಿ ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ಸೌಮ್ಯ ಅಲ್ಲೇ ಪ್ರಾಣ ಬಿಟ್ಟಿದ್ದಳು. ಈ ವಿಷಯ ಹರಡುತ್ತಿದ್ದಂತೆ ಇಡೀ ಪುತ್ತೂರಿಗೆ ಪುತ್ತೂರೇ ಹಿಂಸಾಚಾರಕ್ಕೆ ನಲುಗಿತ್ತು.

ಪುತ್ತೂರು ಹೊತ್ತಿ ಉರಿಯುತ್ತಿತ್ತು. ಪುತ್ತೂರು ತಾಲೂಕಿನಾದ್ಯಾಂತ ಕರ್ಫ್ಯೂ ಜಾರಿ ಮಾಡಲಾಯಿತು ಆದ್ರೂ ಹಿಂಸೆ ತಾಂಡಾವವಾಡುತ್ತಿತ್ತು ಹಿಂದೂ ಪರ ಸಂಘಟನೆಗಳು ಪುತ್ತೂರು ಬಂದ್‌ಗೆ ಕರೆ ನೀಡಿದರು. ಕೊನೆಗೂ ಕೊಲೆ ಪಾತಕಿ ಆರೋಪಿ ಅಶ್ರಫ್ ಬಂಧನವಾಯಿತು.

ಅದಾದ ಎರಡು ತಿಂಗಳಲ್ಲಿ ಆರೋಪಿ ಮಂಗಳೂರಿನಿಂದ ತಪ್ಪಿಸಿಕೊಂಡ..! ಆದ್ರೆ ಕೆಲವೇ ದಿನದಲ್ಲಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿ ಆತನನ್ನು ಮತ್ತೆ ಬಂಧಿಸಲಾಯಿತು. ಆಗಸ್ಟ್ ಬಳಿಕ ಎರಡೇ ವರ್ಷದಲ್ಲಿ ಮತ್ತೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಹೀಗೆ ತಪ್ಪಿಸಿಕೊಂಡ ಅಶ್ರಫ್‌ ಇನ್ನೂ ಪತ್ತೆಯಾಗಿಲ್ಲ ಕೆಲವರ ಪ್ರಕಾರ ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನುವ ಮಾತು ಹಬ್ಬಿತ್ತು.

ಆದರೆ 27 ವರ್ಷವಾದ್ರೂ ಈವರೆಗೆ ಆತನ ಸುಳಿವು ಸಿಕ್ಕಿಲ್ಲ.ಅಶ್ರಫ್‌ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತಿದ್ದ. ಘಟನೆ ನಡೆಯುವ ಒಂದು ತಿಂಗಳ ಹಿಂದೆ ರಜೆ ಹಾಕಿ ಊರಿಗೆ ಬಂದಿದ್ದ ಎನ್ನಲಾಗಿದೆ. ಘಟನೆ ನಡೆಯುವ ಎರಡು ದಿನದ ಹಿಂದೆ ಸೌಮ್ಯಾಳ ತಂದೆಯನ್ನು ಭೇಟಿಯಾಗಿ ಮಗಳ ಬಗ್ಗೆ ವಿಚಾರಿಸಿದ್ದ. ಈತ ಸಹಪಾಠಿ ಆಗಿರಬಹುದು ಎಂದು ಭಾವಿಸಿದ ಗಣಪತಿ ಭಟ್ಟರು ಸೌಮ್ಯಾ ಕಾಲೇಜಿಗೆ ಹೋಗುವ ವಿಷಯ ತಿಳಿಸಿದ್ದರು.

ಆದರೆ ಆತ ದುಷ್ಕೃತ್ಯ ಎಸಗಲೆಂದೇ ಪಾಪಿ ಈ ಮಾಹಿತಿ ಸಂಗ್ರಹಿಸಿದ್ದ. ಕೊಲೆ ಪ್ರಕರಣದ ಬಳಿಕ ಆರೋಪಿ ವಿಕೃತ ಕಾಮಿ ಎನ್ನುವ ಬಗ್ಗೆಯೂ ಮಾಹಿತಿ ಹಬ್ಬಿತ್ತು. ಸೌಮ್ಯಾ ಭಟ್‌ ಕೊಲೆ ನಡೆಯುವ ಎರಡು ದಿನ ಮೊದಲು ಹತ್ತಿರದಲ್ಲೇ ಮನೆಯೊಂದಕ್ಕೆ ನುಗ್ಗಿ ಹುಡುಗಿಯ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿತ್ತು. 26 ವರ್ಷ ದಾಟಿದ್ರೂ ಸೌಮ್ಯ ಭಟ್ ಕುಟುಂಬ ಇನ್ನೂ ಕೂಡ ನ್ಯಾಯಕ್ಕಾಗಿ ಕಾದಿದೆ.

Leave a Comment

Your email address will not be published. Required fields are marked *