ಸಮಗ್ರ ನ್ಯೂಸ್: ದೇಶದಲ್ಲಿ ಕೆಲವು ದಿನಗಳ ಹಿಂದಷ್ಟೇ ಚುರುಕು ಪಡೆದಿದ್ದ ಮುಂಗಾರು ಮಾರುತಗಳು ಎಲ್ನಿನೊ ಪ್ರಭಾವದಿಂದ ಮತ್ತೆ ದುರ್ಬಲಗೊಂಡಿದ್ದು, ಶುಷ್ಕ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ರಾಜ್ಯದಲ್ಲೂ ಕೆಲವು ದಿನಗಳಿಂದ ಬಿಸಿಲ ಝಳ ಏರುತ್ತಿದ್ದು, ಉತ್ತಮ ಮಳೆಯಾದ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ್ದ ರೈತರಲ್ಲಿ ಆತಂಕ ಮನೆ ಮಾಡಿದೆ.
ನೈರುತ್ಯ ಮುಂಗಾರು ಈಗಾಗಲೇ ದುರ್ಬಲಗೊಂಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಮಧ್ಯ, ಪಶ್ಚಿಮ ಮತ್ತು ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಎಲ್ನಿನೊ ಕಾರಣದಿಂದಾಗಿ ತೇವಾಂಶ ಕುಸಿಯುತ್ತಿದ್ದು, ಮೋಡಗಳ ರಚನೆಯೂ ದುರ್ಬಲಗೊಳ್ಳುತ್ತಿದೆ. ಜುಲೈ ಕೊನೆಯ ವಾರದಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಸೂಚನೆಯಿದ್ದು, ನಂತರ ಮುಂಗಾರು ತುಸು ಚುರುಕುಗೊಳ್ಳಬಹುದು ಎನ್ನಲಾಗಿದೆ.
ರಾಜ್ಯದಲ್ಲಿ ಕಳೆದ ಎರಡು ದಿನದಿಂದಲೇ ಮಳೆ ಸ್ತಬ್ಧವಾಗಿದೆ. ಜುಲೈ 14 ರಿಂದ ಜುಲೈ 19 ಬಾನುವಾರದವರೆಗೂ ಭಾರಿ ಮಳೆಯ ಅಲರ್ಟ್ ಇಲ್ಲ. ಕೇವಲ ಐದಾರು ಜಿಲ್ಲೆಗಳಲ್ಲಿ ಹಗುರ ಮಳೆಯಷ್ಟೇ ಆಗಲಿದೆ. ಅದೂ ಆ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಾತ್ರ ಆಗಲಿದ್ದು ರಾಜ್ಯದಾದ್ಯಂತ ತಾಪಮಾನ ಹೆಚ್ಚಳ ಆಗುತ್ತಿದೆ.
ಕರಾವಳಿಯ ಕೆಲವೆಡೆ, ದ. ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರ ಮಳೆ ಹೊರತು ಪಡಿಸಿ ಸದ್ಯಕ್ಕೆ ಯಾವುದೇ ಮಳೆಯ ಸೂಚನೆ ಕಂಡುಬರುತ್ತಿಲ್ಲ.








