ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದ ಹಲವು ರಸ್ತೆಗಳು ಅಭಿವೃದ್ದಿಗೊಂಡಿದೆ, ಇನ್ನು ಕೆಲವು ರಸ್ತೆಗಳ ಕಾಮಗಾರಿ ನಡೆಯುತ್ತಿದೆ, ಈ ನಡುವೆ ಕೆಲ ಕಡೆಗಳಲ್ಲಿ ಸಂಪರ್ಕ ರಸ್ತೆಗಳ ದುಸ್ಥಿತಿ ಹೇಳತೀರದು. ಈ ನಡುವೆ ಸುಳ್ಯ ಕ್ಷೇತ್ರದ ಶಾಸಕರೂ ರಾಜ್ಯದ ಬಂದರು ಹಾಗೂ ಮೀನುಗಾರಿಕಾ ಸಚಿವರೂ ಆಗಿರುವ ಎಸ್. ಅಂಗಾರ ಅವರು ತೆರಳುತ್ತಿದ್ದ ಜೀಪೊಂದು ಅರ್ಧದಲ್ಲಿ ಬಾಕಿಯಾಗಿರುವ ವೀಡಿಯೋ ವೈರಲ್ ಆಗಿದ್ದು ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.
ಸುಳ್ಯ ತಾಲೂಕಿನ ಆಲೆಟ್ಟಿ ಕೂಟೇಲು ಸಂಪರ್ಕ ರಸ್ತೆ ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಅಲ್ಲಿನ ಊರಿನ ಜನರಿಂದ ಕಳೆದ ಬಾರಿ ಚುನಾವಣೆ ಬಹಿಷ್ಕಾರ ಹಾಕಿದ್ದ ಸಂದರ್ಭ ಶಾಸಕರು ಅಲ್ಲಿಗೆ ತೆರಳಿ ಮುಂದಿನ ಬಾರಿ ರಸ್ತೆ ಮಾಡಿ ಕೊಡುವ ಭರವಸೆಯನ್ನು ನೀಡಿದ್ದರು . ಇದೀಗ ಎರಡನೇ ಬಾರಿ ಸಚಿವ ಸ್ಥಾನ ಪಡೆದು ತನ್ನ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಶೀಲನೆಗೆ ಎಂದು ಆಗಸ್ಟ್ 7ರಂದು ಹೋಗುತ್ತಿದ್ದ ವೇಳೆ ರಸ್ತೆಯ ಏರು ಪ್ರದೇಶದಲ್ಲಿ ಸಚಿವರು ಹೋಗುತ್ತಿದ್ದ ಜೀಪು ಮುಂದೆ ಚಲಿಸದೆ ಬಾಕಿಯಾಗಿದೆ.
ಪರ್ಯಾಯ ಮಾರ್ಗವಿಲ್ಲದ ಕಾರಣ ಸಚಿವರು ಜೀಪಿನಿಂದ ಇಳಿದು ಏರು ರಸ್ತೆಯಲ್ಲಿ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಬಂದೊದಗಿತು. ಸಚಿವರ ಬೆಂಬಲಿಗರು ಜೀಪನ್ನು ತಳ್ಳಿ ಮುಂದಕ್ಕೆ ಚಲಿಸುವಂತೆ ಮಾಡಿದ್ದರು. ಕೂಟೇಲು ಅರಂಬೂರು ಸಂಪರ್ಕ ರಸ್ತೆಯನ್ನು ದುರಸ್ತಿಪಡಿಸುವಂತೆ ಆ ಭಾಗದ ನಾಗರೀಕರು ಮನವಿಯನ್ನು ಸಲ್ಲಿಸಿದರು. ಗಡಿಪಣೆಯಿಂದ ಮುಂದೆ ಕೂಟೇಲುನಲ್ಲಿರುವ ಸೇತುವೆಯ ಎರಡು ಬದಿಯ ಮಣ್ಣು ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಕುಸಿಯುವ ಹಂತದಲ್ಲಿದೆ. ತಡೆಗೋಡೆ ನಿರ್ಮಿಸುವ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಸಚಿವರು ಸೇತುವೆ ಬದಿ ಕುಸಿತಗೊಂಡಿರುವ ಪ್ರದೇಶವನ್ನು ವೀಕ್ಷಿಸಿದರು.
ಮೀನುಗಾರಿಕೆ , ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರರ ಪ್ರಯಾಣಿಸುತ್ತಿದ್ದ ಜೀಪ್ ರಸ್ತೆಯ ದುಸ್ಥಿತಿಯ ಕಾರಣಕ್ಕೆ ಮುಂದೆ ಚಲಿಸಲು ಸಾಧ್ಯವಾಗದೆ ಇದ್ದಾಗ ಸಚಿವರು ಇಳಿದು ನಡೆದು – ಓಡಿ ತಮ್ಮ ಪ್ರಯಣ ಮುಂದುವರೆಸಿರುವುದು ಈಗ ಜಾಲತಾಣಗಳಲ್ಲಿ ಚರ್ಚಿತ ವಿಷಯ. ಇಷ್ಟು ವರ್ಷಗಳಿಂದ ಜನ ಶಾಸಕರನ್ನು ಗೆಲ್ಲಿಸಿದರೂ ಈಗ ಶಾಸಕರೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದ್ದು, ನಮ್ಮ ಸುಳ್ಯ ಬದಲಾಗೋದು ಯಾವಾಗ ಎಂದು ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಅಯೋಧ್ಯೆ, ಕಾಶ್ಮೀರವನ್ನು ಬದಲಾಯಿಸಿದವರಿಗೆ ಸುಳ್ಯದ ಅವಸ್ಥೆಯನ್ನು ಬದಲಾಯಿಸಲಾಗದೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.






