ಮಂಗಳೂರು : ನಿನ್ನೆ ತಡರಾತ್ರಿ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಅಕ್ರಮ ಪ್ರವೇಶ ಆರೋಪದಡಿ ಪ್ರಕರಣ ದಾಖಲಾಗಿದೆ.
ವಶಕ್ಕೊಳಗಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಮುರ್ಸಿದಾಬಾದ್ನ ಬಧುಹಾ ಗ್ರಾಮದ ರಾಕೇಶ್ ಎಂದು ಗುರುತಿಸಲಾಗಿದೆ. ರಾತ್ರಿ ಸಿಐಎಸ್ಎಫ್ ಸಿಬ್ಬಂದಿಯು ಗಸ್ತು ತಿರುಗುತ್ತಿದ್ದಾಗ ರನ್ವೇ ಕಾಮಗಾರಿ ನಡೆಯುತ್ತಿದ್ದ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಂಡುಬAದಿದ್ದನು. ಕೂಡಲೇ ಆತನನ್ನು ಹಿಡಿದು ವಿಚಾರಿಸಿದಾಗ ತಾನು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ಲಾರಿ ಚಾಲಕ ತನಗೆ ಸಂಬಳ ನೀಡದೆ ಬಿಟ್ಟು ಹೋಗಿದ್ದು ದಾರಿ ಕಾಣದೆ ವಿಮಾನ ನಿಲ್ದಾಣ ಎಂದೂ ತಿಳಿಯದೆ ಈ ಕಡೆ ಬಂದಿರುವೆ ಎಂದಿದ್ದಾನೆ.
ಆ ಬಳಿಕ ಮಂಗಳೂರು ವಿಮಾನ ನಿಲ್ದಾಣದ ಸಿಐಎಸ್ಎಫ್ ಯುನಿಟ್ನ ನಿರೀಕ್ಷಕ ಪ್ರಮೋದ್ ಕುಮಾರ್ ವಿಚಾರಣೆ ನಡೆಸಿ ನಂತರ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ನಿಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.






