ಬೆಂಗಳೂರು: ರಾಜ್ಯದ ಜನರಿಗೆ ಮೂಲ ಸೌಕರ್ಯ ಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವಲ್ಲಿ ಜಿಲ್ಲಾಧಿಕಾರಿಗಳ ವಿಫಲತೆ ಕಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಂಡಾಂಡಮಂಡಲವಾಗಿದ್ದಾರೆ. ಜೊತೆಗೆ ಭೂ ಮಾಫಿಯಗಳಲ್ಲಿ ಭಾಗಿಯಾಗುತ್ತಿರುವ ರಾಜ್ಯದ ಕೆಲವು ಜಿಲ್ಲಾಧಿಕಾರಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ.
ಸಮಾಜದ ಕಟ್ಟಕಡೆಯ ವ್ಯಕ್ತಿ ಸೇರಿದಂತೆ ಜನರ ಮತ್ತು ಸರ್ಕಾರದ ನಡುವಿನ ಬಹುಮುಖ್ಯ ಕೊಂಡಿ ಜಿಲ್ಲಾಧಿಕಾರಿಗಳು. ಹೀಗಿರುವಾಗ ನೀವು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ನೀವು ಉತ್ತಮವಾಗಿ ಕೆಲಸ ಮಾಡಿದರೆ ಮಾತ್ರ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ. ಹೀಗಾಗಿ ಬಾಸಿಸಂ ಬಿಟ್ಟು ತಳಮಟ್ಟದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು.ಇಲ್ಲದಿದ್ದರೆ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಅರ್ಹತೆ ಕಳೆದುಕೊಳ್ಳುತ್ತೀರಿ ಎಂದು ನಿನ್ನೆ, ಶುಕ್ರವಾರ ನಡೆದ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯಲ್ಲಿ ಬಸವರಾಜ್ ಗುಡುಗಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಅಧಿಕಾರ, ಜವಾಬ್ದಾರಿ, ಬದ್ಧತೆ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುವ ಕುರಿತು ಪಾಠ ಮಾಡಿದ ಮುಖ್ಯಮಂತ್ರಿಗಳು, ನೆರೆ ಪರಿಹಾರ, ವಸತಿ ಯೋಜನೆ ವಿಳಂಬ ಮಾಡಿದ ಹಾಗೂ ಭೂ ವ್ಯವಹಾರಗಳಲ್ಲಿ ಭಾಗಿಯಾದ ಕೆಲ ಜಿಲ್ಲಾಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಬಡವರ ಕೆಲಸವನ್ನು ಸಹಾನುಭೂತಿಯಿಂದ ಮಾಡಬೇಕು. ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು. ನಿಮ್ಮ ಎಲ್ಲಾ ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲವಿದೆ. ಆದರೆ, ದುರುದ್ದೇಶಪೂರಿತ ಹಾಗೂ ತಪ್ಪು ನಡವಳಿಕೆಗಳನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದರು.







