ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ನೀಡುವ ಸರ್ಕಾರಿ ರಜೆಯನ್ನು ಆ.25ಕ್ಕೆ ಘೋಷಿಸುವಂತೆ ವಿನಂತಿಸಿ, ಮುಸ್ಲಿಂ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸರ್ಕಾರಿ ರಜೆಯು ಆ.26ಕ್ಕೆ ನಿಗದಿಯಾಗಿದೆ. ಆದರೆ, ಇಸ್ಲಾಮಿಕ್ ತಿಂಗಳ ಆರಂಭದ ಚಂದ್ರ ದರ್ಶನದಲ್ಲಿ ವ್ಯತ್ಯಾಸದ ಕಾರಣ ಆ. 25ರಂದು ‘ಮೀಲಾದ್’ ನಡೆಸಲು ಜಿಲ್ಲೆಯ ಎಲ್ಲ ಮಸೀದಿಗಳ ಖಾಝಿಗಳು ನಿರ್ಧರಿಸಿದ್ದಾರೆ. ಮೀಲಾದ್ ದಿನದಂದು ಜಿಲ್ಲೆಯ ಎಲ್ಲ ಮಸೀದಿ ವ್ಯಾಪ್ತಿಯಲ್ಲಿ ಮೆರವಣಿಗೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಾರಣಕ್ಕೆ ರಜೆಯ ದಿನಾಂಕವನ್ನು ಬದಲಾಯಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಮಂಗಳೂರು ಕೇಂದ್ರ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯೆನೆಪೋಯ ಅಬ್ದುಲ್ಲ ಕುಂಞಿ, ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಶರೀಫ್ ಅಧ್ಯಕ್ಷ ಜಿ.ಹನೀಫ್ ಇದ್ದರು.




























