ಸಮಗ್ರ ನ್ಯೂಸ್: ಆಶ್ಲೇಷ ನಕ್ಷತ್ರದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ರಾಜ್ಯ, ಹೊರರಾಜ್ಯಗಳಿಂದ ಬಂದ ಸಾವಿರಾರು ಭಕ್ತರು ‘ಆಶ್ಲೇಷ ಬಲಿ’ ಸೇವೆ ಸಲ್ಲಿಸಿದರು. ಈ ಬಾರಿ ದಾಖಲೆಯ 2,540ಕ್ಕೂ ಅಧಿಕ ಸೇವೆ ನಡೆದಿವೆ.
ಕುಕ್ಕೆ ಸುಬ್ರಹ್ಮಣ್ಯ ದೇವರ ನಕ್ಷತ್ರವು ಆಶ್ಲೇಷ ಆಗಿರುವುದರಿಂದ ತಿಂಗಳಿನಲ್ಲಿ ಬರುವ ಆಶ್ಲೇಷ ನಕ್ಷತ್ರದಂದು ಹೆಚ್ಚಿನ ಭಕ್ತರು ಬಂದು ಸೇವೆ ಸಲ್ಲಿಸುವುದು ವಾಡಿಕೆ. ಆಶ್ಲೇಷ ಬಲಿ ಸೇವೆಯು ಪ್ರತಿದಿನ ಬೆಳಿಗ್ಗೆ 6.30ಕ್ಕೆ ಆರಂಭವಾಗಿ 3 ಬ್ಯಾಚ್ ಹಾಗೂ ಸಂಜೆ 5ಕ್ಕೆ ಒಂದು ಬ್ಯಾಚ್ನಲ್ಲಿ ನಡೆಯುತ್ತದೆ.
ಭಕ್ತರು ಬೆಳಿಗ್ಗೆ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ, ದೇವಳದಲ್ಲಿ ಆಶ್ಲೇಷ ಬಲಿ ರಶೀದಿ ನಂತರ ಸಂಕಲ್ಪ ಮಂದಿರದಲ್ಲಿ ಸಂಕಲ್ಪ ಮಾಡಿಸಿ, ಆಶ್ಲೇಷ ಬಲಿ ನಡೆಯುವ ಅಂಗಣಕ್ಕೆ ಸರತಿ ಸಾಲಿನಲ್ಲಿ ತೆರಳಿ ಸೇವೆ ಸಲ್ಲಿಸುತ್ತಾರೆ.







