ಸಮಗ್ರ ನ್ಯೂಸ್: ಸ್ನೇಹಿತೆಯರೊಂದಿಗೆ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ಮುಳುಗಿ ಸಾವನಪ್ಪಿದ ಘಟನೆ ಗುಂಡ್ಯ ಹೊಳೆಯ ಕೊಲ್ಯದಕಟ್ಟ ಡ್ಯಾಂ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತರನ್ನು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿಗಳಾದ ಅರ್ಪಿತಾ (15) ಹಾಗೂ ಸುನೀತ (21) ಎಂದು ಗುರುತಿಸಲಾಗಿದೆ.
ಬೇಸಿಗೆ ರಜೆಯ ಮಜಾ ಕಳೆಯಲು ಐವರು ವಿದ್ಯಾರ್ಥಿನಿಯರ ತಂಡವು ಗುಂಡ್ಯ ಹೊಳೆಯ ಕೊಲ್ಯದಕಟ್ಟ ಅಣೆಕಟ್ಟು ಸಮೀಪಕ್ಕೆ ಬಂದಿತ್ತು. ಸ್ನಾನಕ್ಕಾಗಿ ನದಿಗೆ ಇಳಿದಿದ್ದಾಗ, ನೀರಿನ ಆಳದ ಅರಿವಿಲ್ಲದೆ ಇಬ್ಬರು ಮುಳುಗಿದ್ದಾರೆ. . ಇದನ್ನು ಗಮನಿಸಿದ ಉಳಿದ ಗೆಳತಿಯರು ಅವರನ್ನು ರಕ್ಷಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಂಜೆಯ ವೇಳೆ ಸಂಭವಿಸಿದ ಈ ಅನಿರೀಕ್ಷಿತ ದುರಂತದಿಂದ ವಿಮಲಗಿರಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







