ಸಮಗ್ರ ನ್ಯೂಸ್: ಕಳೆದ 29 ವರ್ಷಗಳಲ್ಲಿ ಕೃಷಿ ಸಾಲ ಶೇ.100ರಷ್ಟು ಮರು ಪಾವತಿ ಮಾಡುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಈ ಬಗ್ಗೆ ನಬಾರ್ಡ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು ನಬಾರ್ಡ್ ಕೂಡ ಮುಂದಾಗಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಅವರು ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ 5ನೇ ಬೋಳೂರು ಶಾಖೆಯ ನೂತನ ಸ್ವಂತ ಕಚೇರಿ ಕಟ್ಟಡ ಮತ್ತು ಮುಖ್ಯ ಸಭಾಭವನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕೃಷಿ ಸಾಲ ಮತ್ತು ಸಾಲ ಮರು ಪಾವತಿಯ ವಿಚಾರದಲ್ಲಿ ದೇಶದಲ್ಲಿಯೇ ಅವಿಭಜಿತ ಕರಾವಳಿ ಜಿಲ್ಲೆ ಅಗ್ರಸ್ಥಾನದಲ್ಲಿದ್ದು, ಸಾಲ ಸಿಗದೇ ರೈತರು ಸಂಕಷ್ಟಪಡುವ ಸ್ಥಿತಿ ಇಲ್ಲ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವಾಣಿಜ್ಯ ಬ್ಯಾಂಕ್ಗಳ ತವರೂರು. ಆದರೆ ಈಗ ಬಹುತೇಕ ಬ್ಯಾಂಕ್ಗಳು ವಿಲೀನಗೊಂಡಿದೆ. ವಾಣಿಜ್ಯ ಬ್ಯಾಂಕಿಂಗ್ ಸಿರಿವಂತರಿಗೆ ಮಾತ್ರ ಸಾಲ ನೀಡುತ್ತವೆ. ಆದರೆ ಸಹಕಾರಿ ಬ್ಯಾಂಕ್ಗಳು ಊರಿನ ಪ್ರತಿಯೊಬ್ಬರಿಗೂ ಸುಲಭದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಪ್ರತೀ ಮನೆಗೂ ಬೆಳಕಾಗಿದೆ. ಮಹಿಳೆಯರಿಗೆ ಸಹಕಾರ ಕ್ಷೇತ್ರದ ಮೂಲಕ ಸ್ವಾವಲಂಬಿ ಬದುಕು ನಿರ್ಮಾಣ ಸಾಧ್ಯವಾಗಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇಲ್ಲ. ನಾನು ಕೂಡ ರಾಜಕೀಯಕ್ಕೆ ಬರೋದಿಲ್ಲ. ಈ ವಿಚಾರದಲ್ಲಿ ನಾನು ಯಾವುದೇ ಒತ್ತಡಕ್ಕೂ ಬಗ್ಗುವುದಿಲ್ಲ. ರಾಜಕೀಯ ರಹಿತವಾಗಿ ಸಹಕಾರಿ ಕ್ಷೇತ್ರ ಅವಿಭಜಿತ ಜಿಲ್ಲೆಯಲ್ಲಿ ಪ್ರಗತಿಯನ್ನು ಕಾಣುತ್ತಿದೆ ಎಂದು ಡಾ.ಎಂ.ಎನ್. ಆರ್. ಹೇಳಿದರು.







