ಸಮಗ್ರ ನ್ಯೂಸ್: ಚುನಾವಣಾ ರಾಜಕೀಯಕ್ಕೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಗುಡ್ ಬೈ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಈ ವಿಷಯ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನನಗೆ ವಯಸ್ಸಾಯ್ತು, ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಆದರೆ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತೇನೆ ಎಂದರು.
ಸಹಕಾರ ಕ್ಷೇತ್ರವು ಪಟ್ಟಭದ್ರ ಹಿತಾಸಕ್ತಿಗಳ ಹಿಡಿತದಿಂದ ಮುಕ್ತಗೊಳಿಸುವ ಸಲುವಾಗಿ ಜನರ ನಿರೀಕ್ಷೆಗೆ ತಕ್ಕಂತೆ ಎರಡೂ ಸದನಗಳ ಒಪ್ಪಿಗೆ ಪಡೆದು ತಿದ್ದುಪಡಿ ತಂದು ರಾಜ್ಯಪಾಲರ ಅಂಕಿತಕ್ಕೆ ಕಡತ ಕಳುಹಿಸಿದ್ದರೂ ಕೇಂದ್ರಕ್ಕೆ ಕಳುಹಿಸುವಂತೆ ಸೂಚಿಸಿದ್ದಾರೆ. ಆದರೆ ಈ ತಿದ್ದುಪಡಿ ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದರಿಂದ ಕೇಂದ್ರಕ್ಕೆ ಕಳುಹಿಸುವ ಅವಶ್ಯವಿಲ್ಲ. ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾಲು ಉತ್ಪಾದಕರಿಗೆ 850 ಕೋಟಿ ರೂ. ಪ್ರೋತ್ಸಾಹ ಧನ ನೀಡಬೇಕಿದ್ದು, ಸರಕಾರ ಶೀಘ್ರ ಕ್ರಮ ವಹಿಸಲಿದೆ, ತಮ್ಮ ಸರಕಾರ ಬಂದ ಮೇಲೆ ಎರಡು ಬಾರಿ ಪ್ರೋತ್ಸಾಹಧನ ಏರಿಸಲಾಗಿದೆ. ಹಣ ಫಲಾನುಭವಿಗೆ ನೇರವಾಗಿ ಹೋಗಲಿದೆ. ಯಾರು ಎರಡು ಬಾರಿ ಏರಿಸಿದ್ದರು ಎಂಬುದು ಹೇಳಲಿ. ಇದು ನಮ್ಮ ಸರ್ಕಾರದ ಸಾಧನೆ ಎಂದರು.




























