ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ವಿನೋದ್ ರಾಜ್ ಅವರು ಭೇಟಿ ಮಾಡಿದ್ದಾರೆ. ಜುಲೈ 22ರಂದು ಭೇಟಿ ಮಾಡಿದ್ದು ಜೈಲಿಗೆ ತೆರಳಿದ ವಿನೋದ್ ರಾಜ್ ಅವರು ದರ್ಶನ್ ಜೊತೆ ಮಾತುಕತೆ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿನೋದ್ ರಾಜ್ ದರ್ಶನ್ ಭೇಟಿಗೆ ತಾಯಿ ನೀಡಿದ ಹೇಳಿಕೆ ಕಾರಣ ಎಂದಿದ್ದಾರೆ. ‘ನನ್ನ ತಾಯಿ ಮಂಚದಲ್ಲಿ ಮಲಗಿದ್ದಾಗ ಒಂದು ಮಾತನ್ನು ಹೇಳಿದ್ದರು. ತೂಗುದೀಪ ಶ್ರೀನಿವಾಸ್ ಮಗ ಬೆಂಬಲ ಇಲ್ಲದೆ ಬೆಳೆದವನು. ಕಷ್ಟದಲ್ಲಿ ಬೆಳೆದ ಹುಡುಗ. ಅವನ ಜೊತೆ ಇರಬೇಕು ಎಂದಿದ್ದರು. ಅಮ್ಮ ಬದುಕಿದ್ದಾಗ ಹೇಳಿದ ಮಾತು ಇದು’ ಎಂದು ಭೇಟಿ ಹಿಂದಿನ ಕಾರಣ ತಿಳಿಸಿದ್ದಾರೆ. ‘ಈ ಘಟನೆ ಯಾಕೆ ಆಯ್ತು ಎಂದು ತುಂಬಾ ನೋವಾಗುತ್ತದೆ. ಸಡನ್ ಆಗಿ ನಡೆಯುವ ಘಟನೆಗಳು ಇವು. ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಬರುತ್ತದೆ. ಅಚಾತುರ್ಯದಿಂದ ಆಗುವ ಘಟನೆಗಳು ಇವು’ ಎಂದು ವಿನೋದ್ ರಾಜ್ ಹೇಳಿದ್ದಾರೆ.




























