ಸಮಗ್ರ ನ್ಯೂಸ್: ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ಎಸ್ಐಟಿ ಕಸ್ಟಡಿಯಲ್ಲಿ ಇದ್ದರು, ಇದೀಗ ಮತ್ತೆ ಅವಧಿ ವಿಸ್ತರಣೆಯಾಗಿದೆ. ಇಂದಿಗೆ ಐಎಸ್ಟಿ ಕಸ್ಟಡಿ ಮುಗಿದಿದ್ದರಿಂದ ಪ್ರಜ್ವಲ್ ಅವರನ್ನು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರಜ್ವಲ್ ರೇವಣ್ಣ ಅವರನ್ನು ಇನ್ನಷ್ಟು ವಿಚಾರಣೆ ನಡೆಸಬೇಕಿದೆ, ಹೀಗಾಗಿ ಅವರನ್ನು ಇನ್ನಷ್ಟು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಬೇಕೆಂದು ಎಸ್ಐಟಿ ಪರ ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿದ ಕೋರ್ಟ್, ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಅವಧಿಯನ್ನು ಜೂನ್ 10ರ ವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಇನ್ನೂ ಆರೋಪಿ ಪ್ರಜ್ವಲ್ ರೇವಣ್ಣ ತನಿಖೆ ಸಹಕಾರ ನೀಡುತ್ತಿಲ್ಲ. ಮಹಿಳೆಯ ವಿಡಿಯೊ ಚಿತ್ರೀಕರಣ ಮಾಡಿದ ಮೊಬೈಲ್ ಬಗ್ಗೆಯೂ ಮಾಹಿತಿ ನೀಡುತ್ತಿದೆ. ಯಾವುದೇ ಪಶ್ನೆಗಳನ್ನು ಕೇಳಿದರೂ ಅವರು ಅದಕ್ಕೆ ಉತ್ತರ ನೀಡುತ್ತಿಲ್ಲ. ನಾನು ವಿಡಿಯೊದಲ್ಲಿ ಇರುವ ವ್ಯಕ್ತಿಯಲ್ಲ ಎಂದಷ್ಟೇ ಹೇಳುತ್ತಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ ಎಂಬುದನ್ನೇ ಪದೇ ಪದೆ ಹೇಳುತ್ತಿದ್ದಾರೆ. ಹೀಗಾಗಿ ವಿಚಾರಣಾ ಪ್ರಕ್ರಿಯೆ ಮುಗಿದಿಲ್ಲ ಎಂದು ಪ್ರಾಸಿಕ್ಯೂಟರ್ ಅಶೋಕ್ ನಾಯಕ್ ವಾದ ಮಾಡಿದರು.
ಅದೇ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಪ್ರಜ್ವಲ್ ರೇವಣ್ಣ ಪರ ವಕೀಲರಾದ ಟಾಮಿ ಸೆಬಾಸ್ಟಿಯನ್ ಪ್ರಕರಣ ದಾಖಲಾದ ಒಂದು ತಿಂಗಳ ಬಳಿಕ ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಅವಕಾಶ ಸಾಕಷ್ಟಿತ್ತು. ಆರು ದಿನಗಳ ಕಸ್ಟಡಿಯಲ್ಲೂ ಅವಕಾಶಗಳಿದ್ದವು. ಮತ್ತೆ ಅವರನ್ನು ಕಸ್ಟಡಿಗೆ ಕೊಡುವ ಅಗತ್ಯವೇ ಇಲ್ಲ ಎಂದು ವಾದ ಮಂಡಿಸಿದರು.
ಈ ವೇಳೆ ಪ್ರಾಸಿಕ್ಯೂಟರ್ ಅಶೋಕ್ ನಾಯಕ್, ಏಳು ದಿನ ಕಸ್ಟಡಿ ಅವಧಿಯಲ್ಲಿ ಯಾವ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡಿಲ್ಲ, ಹೀಗಾಗಿ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಅಲ್ಲದೆ, ಸಂತ್ರಸ್ತೆಯನ್ನು ಆರೋಪಿಯನ್ನು ಮುಖಾಮುಖಿ ವಿಚಾರಣೆ ಮಾಡಬೇಕಿದೆ ಎಂದು ವಾದಿಸಿದರು. ಆರೋಪಿ ತಮ್ಮದು ಎಂದು ಹೇಳಲಾದ ಒಂದು ಮೊಬೈಲ್ ಕೊಟ್ಟಿದ್ದಾರೆ. ಆದರೆ ಅದರಲ್ಲಿ ಹೆಚ್ಚಿನ ವಿವರಗಳು ಇಲ್ಲ. ಆ ಬಗ್ಗೆಯೂ ಹೆಚ್ಚು ಮಾಹಿತಿ ಸಂಗ್ರಹ ಮಾಡಬೇಕಾಗಿದೆ. ಪ್ರಜ್ವಲ್ ವಿದೇಶದಲ್ಲಿದ್ದಾಗ ಹಣ ಸಂದಾಯವಾಗಿದೆ. ಅದರ ಮೂಲಗಳ ಬಗ್ಗೆ ವಿಚಾರಣೆ ಮಾಡಬೇಕಿದೆ. ಹೀಗಾಗಿ ಜೂನ್ 10ರವರೆಗೆ ಕಸ್ಟಡಿ ನೀಡಲು ಎಸ್ಐಟಿ ಮನವಿ ಮಾಡಿದರು.
ವಾದಗಳನ್ನು ಆಲಿಸಿದ ನ್ಯಾಯಾಧೀಶರು ಜೂನ್ 10 , ಸೋಮವಾರದ ವರೆಗೆ ಕಸ್ಟಡಿಗೆ ನೀಡಲು ಅನುಮತಿ ನೀಡಿದ್ದಾರೆ.








