ಸಮಗ್ರ ನ್ಯೂಸ್: ಉತ್ತರ ಪ್ರದೇಶದ ರಾಯ್ ಬರೇಲಿ ನಮ್ಮ ಕುಟುಂಬದ ಪಾಲಿಗೆ ಕರ್ಮಭೂಮಿ. ಈ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದು ನನಗೆ ಭಾವನಾತ್ಮಕ ಕ್ಷಣ. ನಮ್ಮ ಕುಟುಂಬದ ‘ಕರ್ಮಭೂಮಿ’ ಮತ್ತು ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶದ ಜವಾಬ್ದಾರಿಯನ್ನು ನನ್ನ ತಾಯಿ ನನಗೆ ವಹಿಸಿದ್ದಾರೆ ಎಂದು ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೇಥಿ ಮತ್ತು ರಾಯ್ಬರೇಲಿಯ ಜನರು ಯಾವಾಗಲೂ ನಮ್ಮ ಕುಟುಂಬಸ್ಥರಿದ್ದಂತೆ ಎಂದು ಟ್ವೀಟ್ ಮಾಡಿದ್ದಾರೆ. ಅಮೇಥಿ ಮತ್ತು ರಾಯ್ ಬರೇಲಿ ನನಗೆ ಬೇರೆ ಬೇರೆಯಲ್ಲ, ಎರಡೂ ನನ್ನ ಕುಟುಂಬ. ಕಳೆದ 40 ವರ್ಷಗಳಿಂದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಿಶೋರಿ ಲಾಲ್ ಜಿ ಅವರು ಅಮೇಥಿಯಿಂದ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ.
ಮೇ 20ರಂದು 5ನೇ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿರುವ ಅಮೇಥಿ ಮತ್ತು ರಾಯ್ ಬರೇಲಿ ಸೇರಿದಂತೆ ಹಲವು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಇಂದು ರಾಹುಲ್ ಗಾಂಧಿ ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.




























