ಸಮಗ್ರ ನ್ಯೂಸ್ : ಕುಡುಕ ಪತಿಯ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ತಾಯಿ ಸಾವಿಗೆ ತಂದೆಯೇ ಕಾರಣವೆಂದು ಸಿಟ್ಟಾದ ಮಗ ಕಲ್ಲು ಎತ್ತಿ ಹಾಕಿ ತಂದೆಯನ್ನೇ ಕೊಂದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಲಕ್ಕಿಂಪುರ ಗ್ರಾಮದಲ್ಲಿ ನಡೆದಿದೆ.
ತಿಪ್ಪಮ್ಮ (52) ಎಂಬಾಕೆ ಆತ್ಮಹತ್ಯೆಗೆ ಶರಣಾದರೆ, ಅಂಜನಪ್ಪ (60) ಪುತ್ರನಿಂದಲೇ ಕೊಲೆಯಾಗಿದ್ದಾರೆ. ರಮೇಶ್ (30) ಕೊಲೆ ಮಾಡಿ ಜೈಲು ಸೇರಿದ್ದಾನೆ.
ರಮೇಶ್ ತಂದೆ ಅಂಜನಪ್ಪ ಕಟ್ಟಡ ಕೆಲಸ ಮಾಡುತ್ತಿದ್ದರು. ಕುಡಿತದ ದಾಸರಾಗಿದ್ದ ಅಂಜನಪ್ಪ, ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಿದ್ದರು. ದಿನ ಬೆಳಗಾದರೆ ಪತ್ನಿಯೊಂದಿಗೆ ಜಗಳಕ್ಕಿಳಿಯುತ್ತಿದ್ದರು. ಪತಿ ಕಿರುಕುಳ ತಾಳಲಾರದೆ ಬುಧವಾರ ತಡರಾತ್ರಿ ತಿಪ್ಪಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ತಾಯಿ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ರಮೇಶ್, ತಂದೆ ಕಿರುಕುಳಕ್ಕೆ ತಾಯಿ ಮೃತಪಟ್ಟಿದ್ದಾಳೆಂದು ಸಿಟ್ಟಾಗಿ ನೇರವಾಗಿ ಮನೆಗೆ ಬಂದವನೇ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ರಮೇಶ್ನನ್ನು ವಶಕ್ಕೆ ಪಡೆದಿದ್ದಾರೆ.




























