ಸಮಗ್ರ ನ್ಯೂಸ್: ಆನೆಗಳಿಗೆ ಮೇವು ಹಾಗೂ ನೀರನ್ನು ಕಾಡಿನಲ್ಲಿಯೇ ಒದಗಿಸಿಕೊಡಲು ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಇದರಿಂದಾಗಿ ಆನೆಗಳು ಕಾಡಿನಿಂದ ಊರಿನ ಕಡೆಗೆ ಬರುವುದು ಕಡಿಮೆಯಾಗುತ್ತದೆ.
ಈ ಬಾರಿ ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ 600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪೂರ್ಣವಾಗಿ ತಡೆಗೋಡೆ ನಿರ್ಮಾಣವಾದರೆ ಆನೆ – ಮಾನವ ಸಂಘರ್ಷ ನಿಲ್ಲಲಿದೆ.
ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮದ ವತಿಯಿಂದ 12 ಕೋಟಿ ರೂ.ಗಳ ವೆಚ್ಚದಲ್ಲಿ ಕೊಡಗಿನ ಸಂಪ್ರದಾಯದಂತೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ನಿರ್ಮಾಣವಾಗಿದೆ. ಕಚೇರಿ ಎಷ್ಟು ದೊಡ್ಡದು ಮುಖ್ಯವಲ್ಲ. ಜನರ ಸಮಸ್ಯೆಗಳಿಗೆ ನ್ಯಾಯ ಕೊಡಿಸುವುದು ಬಹಳ ಮುಖ್ಯ.
ರಾಜ್ಯದಲ್ಲಿ ಪೊಲೀಸ್ ವಸತಿ ಗೃಹಗಳ ಕೊರತೆ ಇದ್ದು ಈ ನಿಟ್ಟಿನಲ್ಲಿ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ಗಮನ ಹರಿಸಲಿದೆ.
ಚಿಕ್ಕಹೆಜ್ಜಾಲದಲ್ಲಿ ಪೊಲೀಸ್ ತರಬೇತಿ ಶಾಲೆ ಸ್ಥಾಪನೆಯಾಗಬೇಕೆಂಬ ಬೇಡಿಕೆ ನನ್ನ ಗಮನಕ್ಕೆ ಬಂದಿಲ್ಲ, ಬಂದರೆ ಪರಿಶೀಲಿಸಲಾಗುವುದು.
ಹಿಂದಿನ ಸರ್ಕಾರದ ಅವಧಿಯಲ್ಲಿ ಗುಂಡೂರಾವ್ ಬಡಾವಣೆಯಲ್ಲಿನ ಪೊಲೀಸ್ ಇಲಾಖೆ ಕಟ್ಟಡಕ್ಕೆ ಅಡಿಪಾಯ ಹಾಕಿದ್ದು, ಅದಕ್ಕೆ ಉಚ್ಚನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ತೆರವುಗೊಂಡ ನಂತರ ಕ್ರಮ ವಹಿಸಲಾಗುವುದು ಎಂದು ಎಸ್. ಸಿದ್ದರಾಮಯ್ಯ ಹೇಳಿದ್ದಾರೆ.


















