ಸಮಗ್ರ ನ್ಯೂಸ್: ಐಸಿಸಿ ವಿಶ್ವಕಪ್ ಫೈನಲ್ ಸೋಲಿನಿಂದ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಇದೀಗ ಆಸ್ಟ್ರೇಲಿಯಾ ವಿರುದ್ದಧ ಟಿ20 ಸರಣಿಯ ಶುಭಾರಂಭ ಸಮಾಧಾನ ತಂದಿದೆ. ಆಸ್ಟ್ರೇಲಿಯಾ ನೀಡಿದ 209 ರನ್ ಬೃಹತ್ ಟಾರ್ಗೆಟ್ಗೆ ಪ್ರತಿಯಾಗಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು.
ನಾಯಕ ಸೂರ್ಯುಕುಮಾರ್ ಯಾದವ್ ಹೋರಾಟ ಆಸ್ಟ್ರೇಲಿಯಾ ಲೆಕ್ಕಾಚಾರ ಬದಲಿಸಿತು. ಆದರೆ ಅಂತಿಮ ಹಂತದಲ್ಲಿ ದಿಢೀರ್ ವಿಕೆಟ್ ಪತನ ಟೀಂ ಇಂಡಿಯಾ ಆತಂಕ ಹೆಚ್ಚಿಸಿತ್ತು. ಸೂರ್ಯ ಕುಮಾರ್ ವಿಕೆಟ್ ಪತನದ ಬಳಿಕ ಅಕ್ಸರ್ ಪಟೇಲ್, ರವಿ ಬಿಶ್ನೋಯ್, ಅರ್ಶದೀಪ್ ರನೌಟ್ಗೆ ಬಲಿಯಾದರು.ಆದರೆ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ರಿಂಕು ಸಿಂಗ್ ಸಿಡಿಸಿದ ಸಿಕ್ಸರ್ ಭಾರತಕ್ಕೆ ಗೆಲುವು ತಂದುಕೊಟ್ಟಿತು. ಆದರೆ ಇದು ನೋ ಬಾಲ್ ಆಗಿತ್ತು. ಭಾರತ 2 ವಿಕೆಟ್ ರೋಚಕ ಗೆಲುವು ದಾಖಲಿಸಿತು. 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
ಜೋಶ್ ಇಂಗ್ಲಿಸ್ ಸೆಂಚುರಿ ಹಾಗೂ ಸ್ಟೀವನ್ ಸ್ಮಿತ್ ಅರ್ಧಶಕದಿಂದ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. 209 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿತು. ರುತುರಾಜ್ ಗಾಯಕ್ವಾಡ್ ಒಂದು ಎಸೆತ ಎದುರಿಸದೇ ವಿಕೆಟ್ ಕೈಚೆಲ್ಲಿದರು. ರುತರಾಜ್ ಗಾಯಕ್ವಾಡ್ ರನೌಟ್ಗೆ ಬಲಿಯಾಗುವ ಮೂಲಕ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ಎರಡು ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಬ್ಬರಿಸಲು ಆರಂಭಿಸಿದ ಯಶಸ್ವಿ ಜೈಸ್ವಾಲ್ 8 ಎಸೆತದಲ್ಲಿ 21 ರನ್ ಸಿಡಿಸಿ ಔಟಾದರು.
22 ರನ್ಗೆ ಭಾರತ 2 ವಿಕೆಟ್ ಕಳೆದುಕೊಂಡಿತು. ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಜೊತೆಯಾಟ ಟೀಂ ಇಂಡಿಯಾಗೆ ಅತ್ಯಂತ ಮಹತ್ವದ್ದಾಗಿತ್ತು. ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ರನ್ ಚೇಸ್ ಮತ್ತಷ್ಟು ರೋಚಕವಾಗಿಸಿದರು. ಈ ಜೋಡಿ 112 ರನ್ ಜೊತೆಯಾಟ ನೀಡಿತು. ಪ್ರಮುಖ 2 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿದ ಟೀಂ ಇಂಡಿಯಾಗೆ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಜೊತೆಯಾಟ ನೆರವಾಯಿತು.
ಇಶಾನ್ ಕಿಶನ್ 58 ರನ್ ಸಿಡಿಸಿ ಔಟಾದರು. ಇತ್ತ ಹಾಫ್ ಸೆಂಚುರಿ ಸಿಡಿಸಿದ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಆದರೆ ತಿಲಕ್ ವರ್ಮಾರಿಂದ ನಿರೀಕ್ಷಿತ ರನ್ ಹರಿದುಬರಲಿಲ್ಲ. ಕೇವಲ 12 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನೆರವಿನಿಂದ ಭಾರತದ ಗೆಲುವಿಗೆ ಅಂತಿಮ 24 ಎಸೆತದಲ್ಲಿ 38 ರನ್ ಅವಶ್ಯಕತೆ ಇತ್ತು.
ಸೂರ್ಯಕುಮಾರ್ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವಿನತ್ತ ಹೆಜ್ಜೆ ಇಟ್ಟಿತು. ಇನ್ನೇನು 15 ಎಸೆತದಲ್ಲಿ ಭಾರತಕ್ಕೆ 14 ರನ್ ಬೇಕಿತ್ತು. ಅಷ್ಟರಲ್ಲೇ 80 ರನ್ ಸಿಡಿಸಿದ ಸೂರ್ಯಕುಮಾರ್ ವಿಕೆಟ್ ಪತನಗೊಂಡಿತು. ಹೀಗಾಗಿ ಅಂತಿಮ 12 ಎಸೆತದಲ್ಲಿ 14 ರನ್ ಅವಶ್ಯಕತೆ ಇತ್ತು. ರಿಂಕು ಸಿಂಗ್ ಬೌಂಡರಿ ಮೂಲಕ ಭಾರತದ ಆತಂಕ ದೂರ ಮಾಡಿದರು. ಆದರೆ ಅಕ್ಸರ್ ಪಟೇಲ್ ವಿಕೆಟ್ ಪತನ ಮತ್ತೆ ಭಾರತದ ಆತಂಕ ಹೆಚ್ಚಿಸಿತು. ಅಂತಿಮ 3 ಎಸೆತದಲ್ಲಿ ಭಾರತದ ಗೆಲುವಿಗೆ 2 ರನ್ ಅವಶ್ಯಕತೆ ಇತ್ತು. ರವಿ ಬಿಶ್ನೋಯ್ ರನೌಟ್ಗೆ ಬಲಿಯಾದರು. ಅರ್ಶದೀಪ್ ಕೂಡ ರನೌಟ್ ಆದರು. ಅಂತಿಮ ಎಸೆತದಲ್ಲಿ 1 ರನ್ ಅವಶ್ಯಕತೆ ಇತ್ತು. ಆದರೆ ರಿಂಕು ಸಿಂಗ್ ಸಿಕ್ಸರ್ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ಆದರೆ ಅಂತಿಮ ಎಸೆತ ನೋ ಬಾಲ್ ಆಗಿತ್ತು. ಈ ಸಿಕ್ಸರ್ ಸಿಡಿಸುವ ಮುನ್ನವೇ ಭಾರತ ಗೆಲುವಿನ ಗೆರೆ ದಾಟಿತ್ತು. ಹೀಗಾಗಿ ಸಿಕ್ಸರ್ ರಿಂಕು ಹೆಸರಿಗೆ ದಾಖಲಾಗಲಿಲ್ಲ. ಭಾರತ 19.5 ಓವರ್ಗಳಲ್ಲೇ ಗೆಲುವಿನ ಕೇಕೆ ಹಾಕಿತು.



























