ಸಮಗ್ರ ನ್ಯೂಸ್: ಡೆತ್ ನೋಟ್ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆಯಾಗಿರುವ ಘಟನೆ ಮಡಿಕೇರಿಯ ಪಂಪಿನ ಕೆರೆ ಎಂಬಲ್ಲಿ ವರದಿಯಾಗಿದೆ.
ನಿವೃತ ಯೋಧ ಸಂದೇಶ್ (೩೮) ಅವರು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದು, ಮಡಿಕೇರಿ ನಗರದ ಹೊರವಲಯದಲ್ಲಿರುವ ಪಂಪಿನ ಕೆರೆಯ ಬಳಿ ಆತನ ಪಾದರಕ್ಷೆ ಹಾಗು ಸೆಲ್ ಫೋನ್ ಸಿಕ್ಕಿರುವ ಹಿನ್ನಲೆ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗು ಪೊಲೀಸರು ಕೆರೆಯಲ್ಲಿ ಶೋಧಕಾರ್ಯ ನಡೆಸಿದ್ದಾರೆ.
ಮಡಿಕೇರಿಯ ಉಕ್ಕುಡ ನಿವಾಸಿಯವಿರುವ ಸಂದೇಶ್ ಎರಡು ತಿಂಗಳ ಹಿಂದೆಯಷ್ಟೇ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ್ದು ಮಂಗಳವಾರ ಮದ್ಯಾಹ್ನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ. ಇದರ ಬೆನ್ನಲ್ಲೇ ಸಂದೇಶ್ ಪತ್ನಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು ಬಳಿಕ ಮಡಿಕೇರಿಯ ಪಂಪಿನ ಕೆರೆಯ ದಂಡೆಯಲ್ಲಿ ಚಪ್ಪಲಿ ಹಾಗು ಆತ ಬಳಸುತ್ತಿದ್ದ ಮೊಬೈಲ್ ಪತ್ತೆಯಾಗಿದೆ. ಸಂದೇಶ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿ ಅಗ್ನಿಶಾಮಕದಳ ಹಾಗು ಪೊಲೀಸ್ ಸಿಬ್ಬಂದಿಗಳು ಮಂಗಳವಾರ ರಾತ್ರಿವರೆಗೂ ಶೋಧಕಾರ್ಯ ನಡೆಸಿದ್ದು ಮೃತದೇಹ ಪತ್ತೆಯಾಗಲಿಲ್ಲ. ಶೋಧಕಾರ್ಯಕ್ಕೆ ಜಿಟಿ ಜಿಟಿ ಮಳೆಯ ಅಡ್ಡಿಯಾಗಿದೆ.




























