ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೂಡಿ ಹಾಕಿ ಕಸಾಯಿಖಾನೆಗೆ ಬಳಸಲಾಗುತ್ತಿದೆ ಎಂದು ಮಂಚೇನಹಳ್ಳಿ ಗೋ ಸಂರಕ್ಷಣಾ ಸಂಘಟನೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಲು ಹೋದ ಪೊಲೀಸರಿಗೆ ಕಲ್ಲೇಟು ಬಿದ್ದಿದೆ.
ಪೋಲೀಸ್ ಠಾಣಾ ಪಿಎಸ್ ಐ ಹರೀಶ್ ಅವರು ಗೋ ಸಂರಕ್ಷಣಾ ಸಂಘಟನೆಯ ಕಾರ್ಯಕರ್ತರೊಂದಿಗೆ ಘಟನಾ ಸ್ಥಳ ಅಲ್ಲಿಪುರಕ್ಕೆ ತೆರಳಿದ್ದರು. ಗ್ರಾಮದ ಗ್ರೇವ್ ಯಾರ್ಡ್ ರಸ್ತೆಯಲ್ಲಿ ಅಕ್ರಮವಾಗಿ ಕೂಡಿ ಹಾಕಲಾಗಿದ್ದ ಜಾನುವಾರುಗಳ ಕಂಡು ವಾರಸುದಾರರ ಪತ್ತೆಗೆ ಮುಂದಾಗಿತ್ತು. ಅದೇ ಸಮಯಕ್ಕೆ ನೂರಾರು ಜನ ಮುಸ್ಲಿಂ ಯುವಕರು ಜಮಾಯಿಸಿ ವಿರೋಧ ಒಡ್ಡಿದ್ದಾರೆ. ಬುರ್ಖಾಧಾರಿ ಮಹಿಳೆಯರು ಸಹ ಪೊಲೀಸರ ಮೇಲೆ ಮುಗಿಬಿದ್ದಿದ್ದು, ಕಲ್ಲು ತೂರಾಟ ನಡೆಸಿದ್ದಾರೆ.
ಈ ಸಂಬಂಧ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಹೆಚ್ಚುವರಿ ಪೊಲೀಸರ ಸಮೇತ ಅಲ್ಲಿಪುರಕ್ಕೆ ದೌಡಾಯಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಅಕ್ರಮವಾಗಿ ಕೂಡಿ ಹಾಕಿದ್ದ 30 ಜಾನುವಾರುಗಳನ್ನು ರಕ್ಷಣೆ ಮಾಡಿ ಗೋ ಶಾಲೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.



























