ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲುಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿರುವ ಭಾರತ, ನಾಯಕ ವಿರಾಟ್ ಕೊಹ್ಲಿ (57) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್ಗಳ ಸವಾಲಿನ ಮೊತ್ತ ಪೇರಿಸಿದೆ. ರನ್ ಬೆನ್ನತ್ತಿದ ಪಾಕ್.17.5 ಓವರ್ನಲ್ಲಿ ಗೆಲುವಿನ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅತ್ಯಂತ ಕಳಪೆ ಆರಂಭ ಪಡೆಯಿತು. ಆರು ರನ್ ಆಗುವಷ್ಟರಲ್ಲಿ ಆರಂಭಿಕರಾದ ರೋಹಿತ್ ಶರ್ಮಾ (0) ಮತ್ತು ಕೆ ಎಲ್ ರಾಹುಲ್ (3) ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ತಂಡಕ್ಕೆ ಅಲ್ಪ ಮಟ್ಟಿನ ಚೇತರಿಕೆ ನೀಡಿದರು. ಆದರೆ, ತಂಡದ ಮೊತ್ತ 31 ಆಗುವಷ್ಟರಲ್ಲಿ ಸೂರ್ಯಕುಮಾರ್ ಯಾದವ್ (11) ಔಟ್ ಆಗಿದ್ದರಿಂದ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಒಂದಾದ ಕೊಹ್ಲಿ ಹಾಗೂ ರಿಷಬ್ ಪಂತ್ 53 ರನ್’ಗಳನ್ನು ಸೇರಿಸುವಲ್ಲಿ ಯಶಸ್ವಿಯಾದರು. ಇವರಿಬ್ಬರ ಜೊತೆಯಾಟದ ಫಲವಾಗಿ ತಂಡವು ಉತ್ತಮ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು. 39 ರನ್ನಿಗೆ ವಿಕೆಟ್ ಒಪ್ಪಿಸಿದ ಪಂತ್ ಬಳಿಕ ಕ್ರೀಸ್’ಗೆ ಇಳಿದ ರವೀಂದ್ರ ಜಡೇಜ (13) ಹಾಗೂ ಹಾರ್ದಿಕ್ ಪಾಂಡ್ಯ (11) ಹೆಚ್ಚಿನ ಕೊಡುಗೆ ನೀಡುವಲ್ಲಿ ವಿಫಲವಾದರು. ಕೊನೆಗೆ ಇಪ್ಪತ್ತು ಓವರ್’ಗಳ ಅಂತ್ಯಕ್ಕೆ ಭಾರತವು ಏಳು ವಿಕೆಟ್ ನಷ್ಟಕ್ಕೆ 151 ರನ್ ಕಲೆ ಹಾಕಿತು.
ಪಾಕಿಸ್ತಾನ ಪರ ಬೌಲಿಂಗ್ ಮಾಡಿದ ಶಾಹಿನ್ ಅಫ್ರಿದಿ ನಾಲ್ಕು ಓವರ್’ಗಳಲ್ಲಿ 31 ರನ್ ನೀಡಿ ಆರಂಭಿಕ ಆಟಗಾರರು ಸೇರಿದಂತೆ ಒಟ್ಟು ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಇವರ ಬಳಿಕ ಹಸನ್ ಅಲಿ ಎರಡು, ಶಾದಾಬ್ ಖಾನ್ ಹಾಗೂ ಹ್ಯಾರಿಸ್ ರೌಫ್ ತಲಾ ಒಂದು ವಿಕೆಟ್ ಪಡೆದರು.
ಉತ್ತಮ ಬೌಲಿಂಗ್ ಸಾಧನೆ ಮಾಡಿದ ಶಹೀನ್ ಅಫ್ರಿದಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ಒಟ್ಟಾರೆ, ಪಾಕಿಸ್ತಾನವು ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಮೊದಲ ಬಾರಿಗೆ ಸೋಲಿಸಿದ ಸಂಭ್ರಮಾಚರಣೆಯಲ್ಲಿ ಇದ್ದರೆ, ಭಾರತ ತಂಡದ ಅಭಿಮಾನಿಗಳು ನಿರಾಶರಾಗಿದ್ದಾರೆ.



























