ಹಾಸನ: ಆಟವಾಡುತ್ತಿದ್ದಾಗ ಕುತ್ತಿಗೆಗೆ ಜೋಕಾಲಿ ಬಿಗಿದು ಬಾಲಕನೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ತೆಂಡೆಕೆರೆ ಎಂಬಲ್ಲಿ ನಡೆದಿದೆ. ಗ್ರಾಮದ ಲೋಕೇಶ್-ನೇತ್ರಾವತಿ ದಂಪತಿಯ ಪುತ್ರ ಮನೋಜ್ ಎಂಬ ಎಂಟರ ವಯಸ್ಸಿನ ಬಾಲಕ ಆಟ ಆಡುತ್ತಲೇ ಪ್ರಾಣ ಕಳೆದುಕೊಂಡ ದುರ್ದೈವಿ. ನಾಲ್ಕನೆಯ ತರಗತಿಯ ವಿದ್ಯಾರ್ಥಿ ಆಗಿದ್ದ ಈತ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೋಕಾಲಿಯಲ್ಲಿ ಆಡಿದ್ದಾನೆ. ಈ ಸಂದರ್ಭದಲ್ಲಿ ಜೋಕಾಲಿ ಹಗ್ಗ ಉರುಳಾಗಿ ಈತ ಸಿಲುಕಿಕೊಂಡಿದ್ದಾನೆ.
ಬಾಲಕ ಆಟ ಆಡುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಆತ ಸಹಾಯಕ್ಕೆ ಕೂಗಿಕೊಂಡರೂ ಯಾರೂ ಬರದ್ದರಿಂದ ಕೊನೆಗೆ ಉರುಳಲ್ಲಿ ಸಿಲುಕಿ ಒದ್ದಾಡಿ ಸಾವಿಗೀಡಾಗಿದ್ದಾನೆ. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅರಸೀಕೆರೆ ಜಯಚಾಮರಾಜೇಂದ್ರ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


























