ಸಮಗ್ರ ನ್ಯೂಸ್: ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಸಕಾಲಕ್ಕೆ ಕಾಲುವೆಗಳಲ್ಲಿ ನೀರು ಹರಿಯದ ಕಾರಣ ಭತ್ತದ ಫಸಲು ತೀವ್ರ ಕುಸಿತ ಕಂಡಿದ್ದು, ಇದರ ಬೆನ್ನಲ್ಲೇ ಅಕ್ಕಿ ಬೆಲೆ ಏಕಾಏಕಿ ಏರಿಕೆಯಾಗಿದೆ.
ಮಾರುಕಟ್ಟೆಯಲ್ಲಿ ಭತ್ತದ ಇಳುವರಿ ಕಡಿಮೆಯಾಗುವ ಆತಂಕ ಹಾಗೂ ಗಿರಣಿಗಳಲ್ಲಿ ದಾಸ್ತಾನು ಕೊರತೆಯಿಂದಾಗಿ ಎಲ್ಲ ಮಾದರಿಯ ಅಕ್ಕಿ ಬೆಲೆ ಕ್ವಿಂಟಲ್ಗೆ ಸರಾಸರಿ 1,000 ರೂಪಾಯಿಯಷ್ಟು ಹೆಚ್ಚಾಗಿದೆ.
ಸಕಾಲದಲ್ಲಿ ಮಳೆಯಾಗದೆ ಭತ್ತದ ಗದ್ದೆಗಳಿಗೆ ನೀರು ತಲುಪದಿರುವುದು ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಮತ್ತೊಂದೆಡೆ, ಹಳೆ ಸೋನಾ ಮಸೂರಿ ಸೇರಿದಂತೆ ಪ್ರಮುಖ ತಳಿಗಳ ಅಕ್ಕಿ ಗಿರಣಿಗಳಲ್ಲೂ ದಾಸ್ತಾನು ಖಾಲಿಯಾಗುತ್ತಿದೆ. ಗಿರಣಿಗಳಿಂದ ಚಿಲ್ಲರೆ ವ್ಯಾಪಾರಿಗಳ ಕೈಸೇರುವಷ್ಟರಲ್ಲಿ ಸಾಗಣೆ ವೆಚ್ಚವೂ ಸೇರ್ಪಡೆಯಾಗುತ್ತಿದ್ದು, ಅಂತಿಮವಾಗಿ ಸಾರ್ವಜನಿಕರು ಹಾಗೂ ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗಿದೆ.
ಮಾರುಕಟ್ಟೆಗೆ ಹೊಸ ಭತ್ತದ ಆಗಮನಕ್ಕೆ ಇನ್ನು ಕನಿಷ್ಠ ಎರಡು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ಅಕ್ಕಿ ದರ ಹೀಗೆಯೇ ಏರುಮುಖದಲ್ಲಿ ಮುಂದುವರಿಯಲಿದೆ ಎನ್ನಲಾಗಿದೆ. 50 ವರ್ಷಗಳಿಂದ ಸಗಟು ಅಕ್ಕಿ ಮಾರಾಟ ಮಾಡುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಎಲ್ಲ ವಿಧದ ಅಕ್ಕಿ ದರ ಕ್ವಿಂಟಲ್ಗೆ 1,000 ರೂ.ಗಳಷ್ಟು ಹೆಚ್ಚಾಗಿದೆ ಎಂದು ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷೆ ಸಾವಿತ್ರಿ ಪುರುಷೋತ್ತಮ ಅವರು ತಿಳಿಸಿದ್ದಾರೆ.










