ಸಮಗ್ರ ನ್ಯೂಸ್: ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶದ ಯಡಕುಮೇರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ ರೈಲು ಹಳಿಯ ಬಳಿ ಶನಿವಾರ ರಾತ್ರಿ ಭೂಕುಸಿತ ಸಂಭವಿಸಿದ್ದು, ರೈಲು ಸೇವೆಗಳು ಅಸ್ತವ್ಯಸ್ತಗೊಂಡವು.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಶನಿವಾರ ಹೊರಟಿದ್ದ (ರೈಲು ಸಂಖ್ಯೆ 17378) ವಿಜಯಪುರ ಎಕ್ಸ್ಪ್ರೆಸ್ ರೈಲನ್ನು ಭೂಕುಸಿತ ಉಂಟಾದ ಸ್ಥಳದ ಸಮೀಪದಲ್ಲಿ ನಿಲ್ಲಿಸಲಾಗಿದೆ.
ಮುರುಡೇಶ್ವರದಿಂದ ಬೆಂಗಳೂರಿಗೆ (ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್) ಹೊರಟಿದ್ದ ಎಕ್ಸ್ಪ್ರೆಸ್ ರೈಲು ( 16586) ಶಿರಿಬಾಗಿಲು ರೈಲು ನಿಲ್ದಾಣವನ್ನು ರಾತ್ರಿ 8.50ಕ್ಕೆ ತಲುಪಿದೆ. ಕೊಯಿಕ್ಕೋಡ್ನಿಂದ ಬೆಂಗಳೂರಿಗೆ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಹೊರಟಿದ್ದ ಎಕ್ಸ್ಪ್ರೆಸ್ ರೈಲು (16512 ) ಶಿರಿಬಾಗಿಲು ನಿಲ್ದಾಣವನ್ನು ರಾತ್ರಿ 9.56ಕ್ಕೆ ತಲುಪಿದೆ. ಕಾರವಾರದಿಂದ ಬೆಂಗಳೂರಿನ ಕೆಎಸ್ಆರ್ ನಿಲ್ದಾಣಕ್ಕೆ ಹೊರಟಿದ್ದ ರೈಲು (16596 ) ಬಾರ್ಕೂರಿನಿಂದ ರಾತ್ರಿ 10ಕ್ಕೆ ಪ್ರಯಾಣ ಆರಂಭಿಸಿತು. ಬೆಂಗಳೂರಿನಿಂದ – ಕಾರವಾರಕ್ಕೆ ಹೊರಟಿದ್ದ ಪಂಚಗಂಗಾ ಎಕ್ಸ್ಪ್ರೆಸ್ ರೈಲನ್ನು ( 16595 ) ಹಾಸನ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿದೆ.
ಮಾರ್ಗ ಬದಲು: ಕಾರವಾರದಿಂದ ಬೆಂಗಳೂರಿಗೆ ( ಕೆಎಸ್ಆರ್ ನಿಲ್ದಾಣ) ಶನಿವಾರ ಹೊರಟ ಎಕ್ಸ್ ಪ್ರೆಸ್ ರೈಲು ಬೇರೆ ಮಾರ್ಗದಲ್ಲಿ ಸಂಚರಿಸಲಿದ್ದು, ಮಂಗಳೂರು ಜಂಕ್ಷನ್, ಶ್ವರ್ಣೂರು , ಪಾಲಕ್ಕಾಡ್, ಈರೋಡ್, ಜೋಳರಪೇಟೆ ಜಂಕ್ಷನ್ ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದೆ. ಪಶ್ಚಿಮ ಘಟ್ಟದಲ್ಲಿ ಭೂಕುಸಿತಕ್ಕೊಳಗಾದ ಸ್ಥಳದಲ್ಲಿ ರೈಲ್ವೆ ಹಳಿ ಮರುಸ್ಥಾಪನೆ ಕಾಮಗಾರಿ ಪ್ರಗತಿಯಲ್ಲಿದೆ. ಸುರಕ್ಷತೆ ಮತ್ತು ದಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ನೈರುತ್ಯ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ರೈಲು ಸೇವೆಗಳಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳಿದ್ದರೆ ನಂತರ ತಿಳಿಸಲಾಗುವುದು ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ








