ಸಮಗ್ರ ನ್ಯೂಸ್: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು ಹಗ್ಗಕ್ಕೆ ಕಟ್ಟಿರುವ ಪರಿಕರದ ಸಹಾಯದಿಂದ ಹೊಳೆ ದಾಟಿ ಮತದಾರರ ಎಸ್ಐಆರ್ ಪ್ರಕ್ರಿಯೆಗೆ ನೆರವಾದರು.
ಸುಳ್ಯ ವಿಧಾನಸಭಾ ವ್ಯಾಪ್ತಿಯ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಕಟ್ಟೆಮನೆ ಸಮೀಪ ಹೊಳೆಯ ಆಚೆ ಮೂರು ಮನೆಗಳಿವೆ.
ಅಲ್ಲಿಗೆ ನೇರ ರಸ್ತೆ ಸಂಪರ್ಕವಿಲ್ಲ. ರಸ್ತೆ ಮಾರ್ಗವಾಗಿ ತೆರಳಬೇಕಾದರೆ ಬಾಳುಗೋಡು ಮಾರ್ಗವಾಗಿ ಸುತ್ತು ಬಳಸಿ ಹೋಗಬೇಕಾಗುತ್ತದೆ. ಈ ಕಾರಣ ಬಿಳಿನೆಲೆಬೈಲು ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ಬಿಎಲ್ಒ ಲೋಹಿತ್ ಹಾಗೂ ಬಿಎಲ್ಎ ಗುಣವರ್ಧನ ಹಗ್ಗದ ಮೂಲಕ ಹೊಳೆ ದಾಟಿ ಮತದಾರರನ್ನು ಭೇಟಿ ಮಾಡಿದರು. ಮೂರು ಮನೆಗಳಲ್ಲಿರುವ ಮತದಾರರ ವಿವರಗಳನ್ನು ಪರಿಶೀಲಿಸಿ, ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿದರು.
ಮೂರು ಮನೆಗಳಲ್ಲಿ ಒಬ್ಬ ಮತದಾರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಹೊಳೆ ದಾಟಿ ಹೊರಬರುವುದು ಸಾಧ್ಯವಾಗಿ ರಲಿಲ್ಲ. ಹೀಗಾಗಿ ಅವರ ಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿತ್ತು. ಬಾಣೂರು ಭಾಗದಲ್ಲಿ ಶಾಶ್ವತ ಸೇತುವೆ ಇಲ್ಲದ ಕಾರಣ ಸ್ಥಳೀಯರು ದೈನಂದಿನ ಸಂಚಾರಕ್ಕೂ ಇದೇ ಹಗ್ಗದ ಮಾರ್ಗ ಬಳಸುತ್ತಾರೆ. ಮಳೆ ಕಡಿಮೆ ಇದ್ದ ಕಾರಣ, ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ. ಇದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಹೊಳೆ ದಾಟಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದು ಲೋಹಿತ್ ತಿಳಿಸಿದ್ದಾರೆ.







