ಸಮಗ್ರ ನ್ಯೂಸ್: 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿಷೇಧಕ್ಕೆ ಪೂರಕವಾಗಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಹಿಂಪಡೆದುಕೊಂಡಿದೆ. ಇಂದು (ಮೇ 13) ಹೊಸ ವಸ್ತ್ರಸಂಹಿತೆ ಆದೇಶವನ್ನು ಹೊರಡಿಸಿದ್ದು, ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ‘ಹಿಜಾಬ್’ (ತಲೆವಸ್ತ್ರ) ಧರಿಸಲು ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದ ಹೊಸ ಆದೇಶದ ಪ್ರಕಾರ, ಶಾಲಾ-ಕಾಲೇಜುಗಳು ನಿಗದಿಪಡಿಸಿದ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅನುಮತಿ ನೀಡಲಾಗಿದೆ. ಹಿಜಾಬ್, ಪೇಟ ಅಥವಾ ಟರ್ಬನ್ , ಜನಿವಾರ ಅಥವಾ ಪವಿತ್ರ ದಾರ, ಶಿವದಾರ ಮತ್ತು ರುದ್ರಾಕ್ಷಿ ಧರಿಸುವುದರಿಂದ ಶಾಲೆಯ ಶಿಸ್ತು ಅಥವಾ ಬೋಧನಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಸಾಂಪ್ರದಾಯಿಕ ಮತ್ತು ಪದ್ಧತಿ ಆಧಾರಿತ ಸಂಕೇತ ಸಮವಸ್ತ್ರಕ್ಕೆ ಪೂರಕವಾಗಿರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
2022ರಲ್ಲಿ ಉಡುಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಇಡೀ ದೇಶದಲ್ಲೇ ಹಿಜಾಬ್ ವಿಚಾರ ದೊಡ್ಡ ಸುದ್ದಿಯಾಗಿತ್ತು. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದಕ್ಕೆ ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು. ಹೀಗಾಗಿ ಇದು ಧರ್ಮದಂಗಲ್ಗೆ ಕಾರಣವಾಗಿತ್ತು. ಇದೀಗ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳ ವಸ್ತ್ರಗಳಿಗೆ ಅವಕಾಶ ಎಂದು ಹೊಸ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಆದ್ರೆ, ಸಿಂಧೂರ, ಕುಂಕುಮ, ವಿಭೂತಿ, ಕೇಸರಿ ಶಾಲು ಮುಂತಾದವುಗಳ ಧರಿಸುವಿಕೆ ಬಗ್ಗೆ ಈ ಹೊಸ ಆದೇಶದಲ್ಲಿ ಉಲ್ಲೇಖವಾಗಿಲ್ಲ. ಕೇಸರಿ ಶಾಲು ಧರಿಸಲು ಅವಕಾಶ ಇದೆಯೋ, ಇಲ್ಲವೋ ಎಂದು ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಮತ್ತೆ ಗೊಂದಲಗಳು ಶುರುವಾಗುವ ಸಾಧ್ಯತೆಗಳಿವೆ.







