ಸಮಗ್ರ ನ್ಯೂಸ್: ಕರ್ನಾಟಕ ಹಾಲು ಮಹಾಮಂಡಳಿಯು ನಂದಿನಿ ಉತ್ಪನ್ನಗಳ ಪ್ರಚಾರದ ಭಾಗವಾಗಿ ಐಪಿಎಲ್-2026 ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು( ಆರ್ಸಿಬಿ) ತಂಡಕ್ಕೆ ಪ್ರಾಯೋಜಕತ್ವ ನೀಡಿದೆ.
ಎರಡು ವರ್ಷದ ಹಿಂದೆ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡಿತ್ತು. ಈ ಬಾರಿ ಆರ್ಸಿಬಿ ತಂಡದ ಅಧಿಕೃತ ಡೈರಿ ಪಾಲುದಾರ ಆಗಿ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿ ₹4.80 ಕೋಟಿ ವಿನಿಯೋಗ ಮಾಡಲಿದೆ.
‘ನಂದಿನಿ ಬ್ರಾಂಡ್ ಕ್ರೀಡೆ ಮತ್ತು ಯುವಜನತೆಯನ್ನು ಪ್ರೋತ್ಸಾಹಿಸುವ ಧ್ಯೇಯ ಹೊಂದಿದೆ. ಕರ್ನಾಟಕದ ಹೆಮ್ಮೆಯ ಎರಡು ಪ್ರತಿಷ್ಠಿತ ಬ್ರ್ಯಾಂಡ್ಗಳಾದ ‘ನಂದಿನಿ ಮತ್ತು ಆರ್ಸಿಬಿ’ ಒಂದಾಗಿರುವುದು ಸಂತೋಷದ ವಿಷಯ. ಆರ್ಸಿಬಿ ಅಭಿಮಾನಿಗಳೊಂದಿಗೆ ನಂಟನ್ನು ವಿಸ್ತರಿಸಿ ಲೀಗ್ನ ಉತ್ಸಾಹ ಸಂಭ್ರಮಿಸಲು ಎದುರು ನೋಡುತ್ತಿದ್ದೇವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ.
‘ಐಪಿಎಲ್ 2026ರ ಟಿ20 ಲೀಗ್ ಮಾರ್ಚ್ 28ರಿಂದ ಆರಂಭವಾಗಲಿದೆ. ನಂದಿನಿ ಬ್ರಾಂಡ್ನ ಯಾವುದೇ ಜಾಹೀರಾತುಗಳು ಕ್ರೀಡಾಂಗಣದಲ್ಲಿ ಪ್ರಕಟವಾಗುವುದಿಲ್ಲ. ಆಟಗಾರರ ಜರ್ಸಿಗಳ ಮೇಲೂ ನಂದಿನಿ ಲೋಗೋ ಇರುವುದಿಲ್ಲ. ಬದಲಿಗೆ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಆರ್ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಮತ್ತು ದೇವದತ್ ಪಡಿಕಲ್ ಅವರ ಭಾವಚಿತ್ರ ಬಳಸಿಕೊಳ್ಳಲು ಅವಕಾಶವಿರಲಿದೆ’ ಎಂದು ಹೇಳಿದ್ದಾರೆ.







