ಸಮಗ್ರ ನ್ಯೂಸ್: ಕಾಶ್ಮೀರ, ಕರ್ನಾಟಕ, ಕೇರಳದಲ್ಲಿ ಖಮೇನಿ ಹತ್ಯೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಕಷ್ಟು ಜನ ಶಿಯಾ ಮುಸ್ಲಿಮರು ರಸ್ತೆಗಿಳಿದು ಭಾನುವಾರ ಪ್ರತಿಭಟನೆ ನಡೆಸಿದ್ದರು. ಅಮೆರಿಕಾ ಹಾಗೂ ಇಸ್ರೇಲ್ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರ ಹಾಕಿದ್ದಾರೆ. “ಈ ಪ್ರತಿಭಟನೆಕಾರರನ್ನು ಕೂಡ ಇರಾನ್ ದೇಶಕ್ಕೆ ಕಳುಹಿಸಿಬಿಡಿ” ಎಂದು ತೆಲುಗು ನಟಿ, ನಿರೂಪಕಿ ರಶ್ಮಿ ಗೌತಮ್ ಟ್ವೀಟ್ ಮಾಡಿದ್ದಾರೆ.
ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆ ಸಂಬಂಧ ಮಾಡಿದ್ದ ಟ್ವೀಟ್ ಅನ್ನು ರಶ್ಮಿ ಗೌತಮ್ ರೀ-ಟ್ವೀಟ್ ಮಾಡಿ “ದಯವಿಟ್ಟು ಇವರನ್ನು ಇರಾನ್ಗೆ ಕಳುಹಿಸಿ, ಅಲ್ಲಿ ತಮ್ಮ ಜನರೊಂದಿಗೆ ಹೋರಾಡಬಹುದು” ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ವಿನಂತಿಸಿದ್ದಾರೆ.
“ಈ ದೇಶದಲ್ಲಿ ವಿಭಿನ್ನ ಧರ್ಮಗಳು ಮತ್ತು ನಂಬಿಕೆಗಳನ್ನು ಸದಾ ಒಪ್ಪಿಕೊಳ್ಳಲಾಗಿದೆ. ಆದರೆ ತೀವ್ರಗಾಮಿ ಮನಸ್ಥಿತಿಯನ್ನು ಸಹಿಸಲಾಗುವುದಿಲ್ಲ.. ಈ ರೋಗವನ್ನು ನಾವು ಇಲ್ಲಿ ಹರಡಲು ಬಿಡುವುದಿಲ್ಲ.. ಹೌದು ನಮಗೂ ಇಲ್ಲಿ ಸಮಸ್ಯೆಗಳಿವೆ. ಪ್ರತಿ ದೇಶದಲ್ಲಿ ತಮ್ಮ ಆಂತರಿಕ ಹೋರಾಟಗಳನ್ನು ನಡೆಸಲಾಗುತ್ತಿದೆ. ಬಡತನ, ಜಾತಿ ಸಮಸ್ಯೆ, ಅನಕ್ಷರತೆಯ ಹೀಗೆ ಪಟ್ಟಿ ದೊಡ್ಡದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ತೀವ್ರಗಾಮಿ ಮನಸ್ಥಿತಿ ಜನರಿಂದ ನಾವು ಮತ್ತಷ್ಟು ಹಿಂದೆ ಬಿದ್ದಿದ್ದೇವೆ. ನಮ್ಮ ಸ್ವಂತ ಜನರು ನಮ್ಮನ್ನು ನಿಗ್ರಹಿಸಲು ಪ್ರಯತ್ನಿಸಿದಾಗ ಅವರ ವಿರುದ್ಧವೂ ಹೋರಾಡುತ್ತೇವೆ” ಎಂದು ರಶ್ಮಿ ಗೌತಮ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ರಶ್ಮಿ ಟ್ವೀಟ್ಗಳ ಬಗ್ಗೆ ಕೆಲವರು ಚಕಾರ ತೆಗೆದಿದ್ದಾರೆ. ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. “ನೀನು ಮದುವೆಯಾಗು. ಒಂಟಿಯಾಗಿ ಬದುಕುವುದರಿಂದ ಬೇರೆ ಯಾವುದೇ ಧರ್ಮವನ್ನು ದ್ವೇಷಿಸುವಂತೆ ಕಾಣುತ್ತಿದೆ” ಎಂದು ನೆಟ್ಟಿಗನೊಬ್ಬ ವ್ಯಂಗ್ಯವಾಡಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸಿ ರಶ್ಮಿ ತಿರುಗೇಟು ನೀಡಿದ್ದಾರೆ. “ಹುಡುಗಿಯರು ಮದುವೆಯಾಗಲು ಕನಿಷ್ಠ ವಯಸ್ಸು 9 ವರ್ಷ ಇರುವ ತೀವ್ರಗಾಮಿ ಮನಸ್ಥಿತಿಯ ದೇಶದಲ್ಲಿ ನಾನು ವಾಸಿಸುತ್ತಿಲ್ಲ. ನಾನು ಅವಿವಾಹಿತಳಾಗಿರಬಹುದು. ನನಗೆ ಮಕ್ಕಳು ಇಲ್ಲದಿರಬಹುದು. ಆದರೆ ನನ್ನ ದೇಶದಲ್ಲಿ ಇನ್ನೂ ಗೌರವ ಮತ್ತು ಪ್ರತ್ಯೇಕತೆಯೊಂದಿಗೆ ಬದುಕುತ್ತಿದ್ದೇನೆ” ಎಂದು ರಶ್ಮಿ ಕಾಮೆಂಟ್ ಮಾಡಿದ್ದಾರೆ.







