ಸಮಗ್ರ ನ್ಯೂಸ್: ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಯುವಕರಿಬ್ಬರು ಕೈಯಲ್ಲಿ ಮಾರಾಕಾಸ್ತ್ರ ಹಿಡಿದು ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಕಲಬುರಗಿಯ ಆದರ್ಶ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ವಿಡಿಯೊ ವೈರಲ್ ಬೆನ್ನಲ್ಲೇ ಮೂವರು ಅರೆಸ್ಟ್ ಆಗಿದ್ದಾರೆ.
ಇತ್ತೀಚೆಗೆ ಅರಿಸಿನ ಶಾಸ್ತ್ರ ಸಮಾರಂಭದಲ್ಲಿ ರಾಜಕೀಯ ಮುಖಂಡರೊಬ್ಬರು ಕೈಯಲ್ಲಿ ಪಿಸ್ತೂಲ್ ಹಿಡಿದು ಕುಣಿದ ಪ್ರಕರಣ ಸದ್ದು ಮಾಡಿದ ಬೆನ್ನಲ್ಲೆ ಈ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ತುಷಾರ್ ಎಂಬ ಯುವಕನ ಮದುವೆ ಇತ್ತು. ಆ ಸಮಾರಂಭದಲ್ಲಿ ಸಂಜಯ್ ಹಾಗೂ ರಾಜವರ್ಧನ್ ಎಂಬುವರು ತುಷಾರ್ ಎಂಬಾತನ ಪ್ರಚೋದನೆಯಿಂದ ಸಾರ್ವಜನಿಕರಿಗೆ ಭಯ-ಭೀತಿ ಹುಟ್ಟಿಸುವ ರೀತಿಯಲ್ಲಿ ಕೈಯಲ್ಲಿ ಹರಿತವಾದ ಚಾಕು ಮತ್ತು ತಲ್ವಾರ್ ಹಿಡಿದು ನೃತ್ಯ ಮಾಡುವ ದೃಶ್ಯ ವಿಡಿಯೊದಲ್ಲಿದೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೆ ಅಶೋಕನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಬಸವನಗರದ ರಾಜವರ್ಧನ್ ಸಂಗವಾರ (31), ಸಂಜಯ ಗಾಯಕವಾಡ್ (23) ಹಾಗೂ ತುಷಾರ್ ಗಾಯಕವಾಡ್ (24) ಬಂಧಿತರು.







