ಸಮಗ್ರ ನ್ಯೂಸ್: ಕರಾವಳಿ ಭಾಗದ ಜನರಿಗೆ ಗುಡ್ ನ್ಯೂಸ್ವೊಂದು ಇದೆ. ದಕ್ಷಿಣ ಕನ್ನಡದಲ್ಲಿ ಕೆಎಸ್ಆರ್ಟಿಸಿ ವಿವಿಧ ಮಾರ್ಗಗಳಲ್ಲಿ 100 ಎಲೆಕ್ಟ್ರಿಕ್ ಬಸ್ಸುಗಳನ್ನು ಓಡಿಸಲು ಸಿದ್ಧತೆ ನಡೆಸುತ್ತಿರುವ ನಡುವೆಯೇ, ಖಾಸಗಿ ಸಾರಿಗೆ ಸಂಸ್ಥೆ ಕೂಡ ಎಲೆಕ್ಟ್ರಿಕ್ ಬಸ್ಗಳನ್ನು ಪರಿಚಯಿಸಲು ಮುಂದಾಗಿದೆ.
ಮಂಗಳೂರಿನ ಮಂಗಳಾದೇವಿ ದೇವಸ್ಥಾನದಿಂದ ಪ್ರಾರಂಭವಾಗುವ ರೂಟ್ ನಂ. 27ರಲ್ಲಿ ಖಾಸಗಿ ಎಲೆಕ್ಟ್ರಿಕ್ ಬಸ್ ಒಂದು ವಾರದೊಳಗೆ ಸಂಚಾರ ಆರಂಭಿಸುವ ಸಾಧ್ಯತೆಯಿದೆ. ಇದು ನಗರ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಲಾಗುತ್ತಿದೆ.
ಎಲೆಕ್ಟ್ರಿಕ್ ಬಸ್ಗಳ ಪರಿಚಯದಿಂದ ಇಂಧನ ವೆಚ್ಚ ಕಡಿಮೆ ಆಗುವುದರ ಜೊತೆಗೆ ವಾಯು ಮಾಲಿನ್ಯವೂ ತಗ್ಗಲಿದೆ ಎಂಬ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ಸುಗಮ, ಪರಿಸರ ಸ್ನೇಹಿ ಪ್ರಯಾಣದ ಅನುಭವ ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪರಿಸರ ಸ್ನೇಹಿ ವಾಹನಗಳನ್ನು ಪರಿಚಯಿಸುವ ಮೂಲಕ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸುವತ್ತ ಖಾಸಗಿ ವಲಯವೂ ಮುಂದಾಗಿದೆ. ಇದರಿಂದ ಕರಾವಳಿ ಭಾಗದಲ್ಲಿ ಪರಿಸರ ಸಂರಕ್ಷಣೆಗೂ ಉತ್ತೇಜನ ಸಿಗುವ ಜೊತೆಗೆ, ಪ್ರಯಾಣಿಕರಿಗೆ ಆಧುನಿಕ ಹಾಗೂ ಸುಗಮ ಸಾರಿಗೆ ಸೇವೆ ದೊರೆಯಲಿದೆ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ರಾಜ್ ಆಳ್ವಾ ಅವರ ಮಾಹಿತಿ ಪ್ರಕಾರ, ಹೊಸ ಎಲೆಕ್ಟ್ರಿಕ್ ಬಸ್ ಇನ್ನೂ ಕೆಲವು ದಿನಗಳಲ್ಲಿ ಮಂಗಳೂರಿಗೆ ತಲುಪುವ ನಿರೀಕ್ಷೆಯಿದ್ದು, ಫೆಬ್ರವರಿ 26ರಿಂದ ಸಂಚಾರ ಆರಂಭಿಸಲು ಯೋಜಿಸಲಾಗಿದೆ.
ತಕ್ಷಣದ ಆರ್ಥಿಕ ಲಾಭಕ್ಕಿಂತ ಪರಿಸರ ರಕ್ಷಣೆಗೆ ಹೆಚ್ಚು ಅದ್ಯತೆ ನೀಡಬೇಕಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಇನ್ನೂ ಐದು ಬಸ್ ಸಂಚಾಲಕರು ಒಟ್ಟಾಗಿ ‘ಚಾರ್ಜ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯನ್ನು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ಪರಿಚಯಿಸುವ ಉದ್ದೇಶ ಅವರದ್ದಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಪಿಎಂ-ಇಬಸ್ ಸೇವಾ ಯೋಜನೆಯಡಿ ಮಂಜೂರಾದ 100 ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲು ಮಂಗಳೂರು ವಿಭಾಗ ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ವಲಯ ಎರಡೂ ಸೇರಿ ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆ ಬಲಪಡಿಸಲು ಮುಂದಾಗಿವೆ. ಒಟ್ಟಿನಲ್ಲಿ ಇದರಿಂದ ಕರಾವಳಿ ಭಾಗದ ಜನರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಈ ಬಸ್ಗಳ ಬರುವಿಕೆಗಾಗಿ ಕಾತರದಿಂದ ಕಾದಿದ್ದಾರೆ.







