ಸಮಗ್ರ ನ್ಯೂಸ್: ಮದುವೆಯಾದ ಹಲವು ತಿಂಗಳು, ವರ್ಷಗಳ ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡುವುದು ಸಾಮಾನ್ಯ. ಆದರೆ, ಇಲ್ಲೊಂದು ಜೋಡಿ ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ಹೊಡೆದಾಡಿಕೊಂಡಿದ್ದು , ಇವರಿಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು-ವರ ಹೊಡೆದಾಡಿಕೊಂಡು, ವಧು ಸಾವಿಗೀಡಾಗಿ, ವರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ತ್ಯಂಬರಸನಹಳ್ಳಿಯಲ್ಲಿ ನಡೆದಿದೆ. ಲಿಖಿತಶ್ರೀ ಮೃತ ವಧು, ನವೀನ್ ಗಾಯಾಳು ವರ.
ಅದ್ಧೂರಿಯಾಗಿ ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಆದರೆ ಅದೇನಾಯಿತೋ ಗೊತ್ತಿಲ್ಲ, ಕೆಲಗಂಟೆಗಳ ನಂತರ ರೂಮ್ಗೆ ಹೋಗಿದ್ದ ನವದಂಪತಿ ಅಲ್ಲೇ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ವಧು ಕೊನೆಯುಸಿರೆಳೆದಿದ್ದಾಳೆ.
ಮದುವೆಯಾದ ಕೆಲ ಗಂಟೆಗಳ ನಂತರ ವಧು, ವರರು ಮನೆಯ ಕೊಠಡಿಗೆ ಹೋಗಿದ್ದಾರೆ. ಕೊಠಡಿ ಹೋದ ಕೆಲ ಹೊತ್ತಿಗೆ ನವೀನ್ ಹಾಗೂ ಲಿಖಿತ ಹೊಡೆದಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಲಿಖಿತ ಸಾವನ್ನಪ್ಪಿದ್ರೆ, ನವೀನ್ ಕೂಡ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.







