ಸಮಗ್ರ ನ್ಯೂಸ್: ಆರ್ಥಿಕ ಸಂಕಷ್ಟ ಹಾಗೂ ಸಾಲದ ಒತ್ತಡ ತಾಳಲಾರದೆ ನಿಜಾಮಾಬಾದ್ ನಗರದಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಂದೆ-ತಾಯಿ ಇಬ್ಬರೂ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
ನಿಜಾಮಾಬಾದ್ ಜಿಲ್ಲೆಯ ಮೆಂಡೋರಾ ಮಂಡಲದ ನಾಗಂಪೇಟೆ ಗ್ರಾಮದ ಶೇಷಾಲ ನರೇಶ್ ಹಾಗೂ ನಿಜಾಮಾಬಾದ್ ಕೋಟಗಲ್ಲಿಗೆ ಸೇರಿದ ಮೇಘನಾ 2014ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರಿದ್ದಾರೆ. ನರೇಶ್ ಅವರ ತಂದೆ ಮೃತಪಟ್ಟ ಬಳಿಕ ಅನುಕಂಪದ ಆಧಾರದ ಮೇಲೆ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದರು. ಇತ್ತೀಚೆಗೆ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಬಡ್ತಿ ಪಡೆದಿದ್ದ ಅವರು ನಿಜಾಮಾಬಾದ್ ಗ್ರಾಮೀಣ ERO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸ್ವಂತ ಮನೆ ಹೊಂದುವ ಉದ್ದೇಶದಿಂದ ನರೇಶ್ ಕಳೆದ ವರ್ಷ ಸುಮಾರು ರೂ.90 ಲಕ್ಷ ಸಾಲ ಮಾಡಿ ಮನೆ ಖರೀದಿಸಿದ್ದರು ಎನ್ನಲಾಗಿದೆ. ಈ ಸಾಲವನ್ನು ಬ್ಯಾಂಕ್ ಗೃಹ ಸಾಲದ ಮೂಲಕ ತೀರಿಸಲು ಅವರು ನಿರೀಕ್ಷಿಸಿದ್ದರು. ಆದರೆ ನಿರೀಕ್ಷಿಸಿದ ರೀತಿಯಲ್ಲಿ ಗೃಹ ಸಾಲ ಮಂಜೂರಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಪತ್ತೆಯಾದ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದು ,ಆರ್ಥಿಕ ಸಂಕಷ್ಟ ಹಾಗೂ ಮಾನಸಿಕ ಒತ್ತಡವೇ ಈ ನಿರ್ಧಾರಕ್ಕೆ ಕಾರಣ ಎಂದು ನರೇಶ್ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳ ಭವಿಷ್ಯವನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಹಾಗೂ ತಮ್ಮ ಮೇಲಿನ ಕೋಪವನ್ನು ಮಕ್ಕಳ ಮೇಲೆ ತೋರಿಸಬಾರದು ಎಂದು ಅವರು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.








