ಸಮಗ್ರ ನ್ಯೂಸ್: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಪ್ರಕ್ರಿಯೆ ಮತ್ತೆ ಮುಂದೂಡಲ್ಪಟ್ಟಿದೆ. ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರಿಂದ ನೂತನ ಸಚಿವರ ಅಂತಿಮ ಪಟ್ಟಿಗೆ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ, ಇಂದು ನಡೆಯಬೇಕಿದ್ದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ತಾತ್ಕಾಲಿಕವಾಗಿ ವಿಳಂಬವಾಗಿದೆ.
ರಾಜಭವನದ ‘ಲೋಕಭವನ’ದಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂಬ ವದಂತಿಗಳು ಬಲವಾಗಿದ್ದವು. ಈ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯಪಾಲರ ಅನುಮತಿಗೂ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜಭವನದ ಅಧಿಕಾರಿಗಳು ಸದ್ಯಕ್ಕೆ ಲೋಕಭವನದಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮ ನಿಗದಿಯಾಗಿಲ್ಲ. ಶಾಸಕರು ಮತ್ತು ನಾಯಕರ ಪಟ್ಟಿ ಅಂತಿಮಗೊಳ್ಳಲು ಕನಿಷ್ಠ ಎರಡು ದಿನಗಳ ಕಾಲ ಕಾಯುವಂತೆ ಸರ್ಕಾರವು ಮೌಖಿಕ ಸೂಚನೆ ನೀಡಿದೆ.
ಹೈಕಮಾಂಡ್ ಮತ್ತು ರಾಜ್ಯ ನಾಯಕರ ನಡುವೆ ಸಮಾಲೋಚನೆಗಳು ಇನ್ನೂ ಪೂರ್ಣಗೊಳ್ಳದ ಕಾರಣ ಬುಧವಾರ ಯಾವುದೇ ಸಮಾರಂಭ ನಡೆಯುವುದಿಲ್ಲ. ಹೈಕಮಾಂಡ್ ಮಟ್ಟದಲ್ಲಿ ನೂತನ ಸಚಿವರ ಪಟ್ಟಿ ಅಂತಿಮಗೊಂಡ ನಂತರವಷ್ಟೇ ಮುಂದಿನ ದಿನಾಂಕ ಅಧಿಕೃತವಾಗಿ ಹೊರಬೀಳಲಿದೆ.








