ಸಮಗ್ರ ನ್ಯೂಸ್: ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಇತ್ತೀಚೆಗೆ ನಡೆದ ನೀಟ್ ಯುಜಿ-2026 ಮೊದಲ ಪರೀಕ್ಷೆಯಲ್ಲಿ ನಡೆದ ಪ್ರಶ್ನೆ ಪತ್ರಿಕೆಸೋರಿಕೆ ವಿಚಾರಕ್ಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಗೊಳಿಸುವಂತೆ ಆಗ್ರಹಿಸಿ ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ನಿರಶನ ಶುಕ್ರವಾರಕ್ಕೆ 20 ದಿನ ಪೂರೈಸಿದೆ.
ಈಗಾಗಲೇ 20ದಿನಗಳ ಆಮರಣ ಉಪವಾಸ ಸತ್ಯಾಗ್ರಹದಿಂದ ಬರೋಬ್ಬರಿ 9ಕೆ.ಜಿಗೂ ಅಧಿಕ ತೂಕ ಇಳಿಕೆಯಾಗಿ, ಆರೋಗ್ಯ ಕ್ಷೀಣಿಸುತ್ತಿರುವ ಹೊತ್ತಿನಲ್ಲೇ ಇದೀಗ ಹೋರಾಟಗಾರ ಸೋನಮ್ ವಾಂಗ್ಚುಕ್ ಮಾತನಾಡಿದ್ದು, ಕೇಂದ್ರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಮಾತನಾಡಿದ ವಾಂಗ್ಚುಕ್ ”ನನ್ನ ದೈಹಿಕ ಸ್ಥಿತಿ ದುರ್ಬಲಗೊಳ್ಳುತ್ತಿದೆ ನಿಜ, ಆದರೆ ನನ್ನ ಸಂಕಲ್ಪ ಮಾತ್ರ ಅಚಲವಾಗಿದೆ. ಜುಲೈ 20ರವರೆಗೂ ಬದುಕಿರುತ್ತೇನೆ, ಅಲ್ಲಿಯವರೆಗೂ ಹೋರಾಟ ಮುಂದುವರಿಸುತ್ತೇನೆ,” ಎಂದು ವಾಂಗ್ಚುಕ್ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದ್ದಾರೆ.
ಮುಂದುವರೆದು, ಒಂದು ಹಂತದಲ್ಲಿ”ಶಿಕ್ಷಣ ಸುಧಾರಣೆಗೆ ನಡೆಯುತ್ತಿರುವ ಹೋರಾಟವನ್ನು ಜೀವಂತವಾಗಿಡಲು ಜುಲೈ 20ರವರೆಗೂ ನಾನು ಬದುಕಿರುವೆ. ಅಂದಿನ ನಮ್ಮ ಉದ್ದೇಶಿತ ‘ಸಂಸತ್ ಚಲೋ’ ಹೋರಾಟಕ್ಕೆ ಜನ ಬೆಂಬಲ ಸಿಗದಿದ್ದರೆ ಮತ್ತೆ ಭೂತವಾಗಿ ಮರಳಿ ಬರುತ್ತೇನೆ. ನಮ್ಮ ಹೋರಾಟವನ್ನು ಬೇರೊಂದು ರೀತಿಯಲ್ಲಿ ಕೈಗೊಳ್ಳಲಾಗುವುದು,” ಎಂದು ವಾಗ್ಚುಕ್ ಗುಡುಗಿದ್ದಾರೆ. ಅವರು ಹೀಗೆ ಲಘು ದಾಟಿಯಲ್ಲಿ ಹೇಳುತ್ತಿದ್ದಂತೆಯೇ ಬೆಂಬಲಿಗರ ಹರ್ಷೋದ್ಗಾರ ಮುಗಿಲುಮುಟ್ಟಿತು.
ಅಪಾರ ಜನ ಬೆಂಬಲ ಮುಂದುವರಿದಿದ್ದು, ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ವಾಂಗ್ಚುಕ್ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಸೋನಮ್ ವಾಂಗ್ಚುಕ್ ಮಾತನಾಡಿ ”ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರುವ ಮುನ್ನವೇ ಸತ್ಯಾಗ್ರಹ ಕೊನೆಗೊಳಿಸಿದರೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಉದ್ದೇಶಿತ ಹೋರಾಟ ಹಾದಿ ತಪ್ಪುತ್ತದೆ. ಶಿಕ್ಷಣ ಸಚಿವರ ವಜಾಗೊಳಿಸುವ ವಿಷಯವಾಗಿ ಸರ್ಕಾರದ ಜತೆ ಮಾತುಕತೆಗೆ ನಾವು ಸಿದ್ಧವಿದ್ದೇವೆ. ಆದರೆ, ನಮ್ಮ ಬೇಡಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಬೇಕು,” ಎಂದು ವಾಂಗ್ಚುಕ್ ಪ್ರತಿಪಾದಿಸಿದರು.








