ಸಮಗ್ರ ನ್ಯೂಸ್: ಬಂಟ್ವಾಳ ತಾಲೂಕಿನ ಬಿ. ಸಿ. ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಂಟ್ಬಾಳ ತಾಲೂಕಿನ ಕಕ್ಕೆಪದವು ನಿವಾಸಿ ಬಾಲಕೃಷ್ಣ ಗೌಡ ಮಗಳು ಲಾವಣ್ಯ(21) ಅವರನ್ನು ಜು.16 ರಂದು ಸಂಜೆ ಸುಮಾರು 5:30 ಕ್ಕೆ ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಪುರುಷೋತ್ತಮ ಗೌಡ ಮಗ ಚೇತನ್ ಗೌಡ(22) ನನ್ನು ಪೊಲೀಸರು ಬಂಧಿಸಿದ್ದಾರೆ.
ಜು.17 ರಂದು ಬೆಳಗ್ಗೆ ಮಂಗಳೂರು ನಗರದ ವಾಮಾಂಜೂರಿನ ಪಚ್ಚನಾಡಿಯಲ್ಲಿ ಆರೋಪಿ ಚೇತನ್ ನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ಸಿನಿಂದ ಇಳಿದ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಎಸ್ಪಿ ಅರುಣ್ ಕುಮಾರ್ ಅವರು ವಿಶೇಷ ತಂಡವನ್ನು ರಚಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್ನಲ್ಲಿ ನಿನ್ನೆ 21 ವರ್ಷದ ಲಾವಣ್ಯ ಎಂಬಾಕೆಯನ್ನು ಬೆಳ್ತಂಗಡಿ ಒಡಿಲ್ನಾಳದ ನಿವಾಸಿ 22 ವರ್ಷದ ಚೇತನ್ ಎಂಬಾತ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಈ ಘಟನೆ ಇಡೀ ಕರಾವಳಿಯಾದ್ಯಂತ ಆತಂಕವನ್ನು ಸೃಷ್ಟಿಸಿತ್ತು.
ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಕೆಲಸ ಮಾಡುತ್ತಿದ್ದ ಲಾವಣ್ಯ ಎಂಬಾಕೆ ಕಲ್ಲಡ್ಕದಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬಿಸಿರೋಡ್ಗೆ ಬಂದಿದ್ದಾಳೆ. ನಂತರ ತನ್ನೂರಾಗಿರುವ ಕಕ್ಯಪದವಿಗೆ ತೆರಳುವ ಬಸ್ಸನ್ನು ಏರಿದ್ದಾಳೆ. ಈ ವೇಳೆ ಆರೋಪಿ ಚೇತನ ಕೂಡ ಅಲ್ಲಿಗೆ ಬಂದಿದ್ದ, ಆತನನ್ನು ನೋಡಿ ಬೆದರಿದ ಯುವತಿ ಬಸ್ಸಿನಿಂದ ಇಳಿದಿದ್ದಾಳೆ. ಆಕೆಯನ್ನು ಬೆನ್ನಟ್ಟಿದ ಚೇತನ ತನ್ನ ಬಳಿಯಲ್ಲಿ ಆಯುಧದಿಂದ ಆಕೆಯ ಮೇಳೆ ದಾಳಿ ಮಾಡಿ, ಸ್ಥಳದಿಂದ ಎಸ್ಕೇಪ್ ಆಗಿದ್ದ.







