ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನಾ ಪ್ರಕ್ರಿಯೆಯು ಜುಲೈ 1, 2026 ರಿಂದ ಆರಂಭವಾಗಿದ್ದು, ಬಾಡಿಗೆದಾರರು ತಮ್ಮ ಆಧಾರ್ ವಿವರಗಳ ನವೀಕರಣ (ಅಪ್ಡೇಟ್) ಕುರಿತು ಯಾವುದೇ ಗೊಂದಲ ಅಥವಾ ಆತಂಕ ಪಡಬೇಕಾಗಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸ್ಪಷ್ಟಪಡಿಸಿದೆ.
ಮನೆ ಮನೆ ಸಮೀಕ್ಷೆ ನಡೆಸಲಿರುವ ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ, ಹಳೆಯ ಬಾಡಿಗೆದಾರರ ಆಧಾರ್ ವಿವರಗಳನ್ನು ತೆಗೆದುಹಾಕಿ ಪ್ರಸ್ತುತ ವಾಸವಿರುವ ಬಾಡಿಗೆದಾರರ ಆಧಾರ್ ಸಂಖ್ಯೆಯನ್ನು ಸ್ಥಳದಲ್ಲೇ ಅಪ್ಡೇಟ್ ಮಾಡಲಿದ್ದಾರೆ. ಹಳೆಯ ದಾಖಲೆಗಳ ಕಾರಣದಿಂದಾಗಿ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತಗೊಳ್ಳಬಹುದು ಎಂಬ ಬಾಡಿಗೆದಾರರ ಆತಂಕಕ್ಕೆ ಬೆಸ್ಕಾಂ ತೆರೆ ಎಳೆದಿದ್ದು, ಯೋಜನೆ ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದೆ.
ವಿವರಗಳನ್ನು ಬದಲಾಯಿಸಲು ಬಾಡಿಗೆದಾರರು ಯಾವುದೇ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಬೆಸ್ಕಾಂ ಸಿಬ್ಬಂದಿಯೇ ನೇರವಾಗಿ ಮನೆ ಬಾಗಿಲಿಗೆ ಬಂದು ಸಮೀಕ್ಷೆ ನಡೆಸಲಿದ್ದು, ಆ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮತ್ತು ಬಾಡಿಗೆ/ಲೀಸ್ ಕರಾರು ಪತ್ರದ ವಿವರಗಳನ್ನು ಒದಗಿಸಿದರೆ ಸಾಕು. ಇದು ಕೇವಲ ಫಲಾನುಭವಿಗಳ ದಾಖಲೆಗಳನ್ನು ದೃಢೀಕರಿಸುವ ಸಾಮಾನ್ಯ ಪ್ರಕ್ರಿಯೆಯಾಗಿದೆ.
ಹೀಗಾಗಿ ಗ್ರಾಹಕರು ಯಾವುದೇ ಆತಂಕವಿಲ್ಲದೆ ಸಮೀಕ್ಷಾ ತಂಡಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು ಹಾಗೂ ಮನೆ ಮಾಲೀಕರು ಸಹ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಬೆಸ್ಕಾಂ ಕೋರಿದೆ.








