ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಸಾಗಾಟವಾಗುತ್ತಿದ್ದ ಸುಮಾರು 70 ಅಡಿಕೆ ತುಂಬಿದ ಲಾರಿಗಳನ್ನು ಅಲ್ಲಿನ ಸರ್ಕಾರಿ ಅಧಿಕಾರಿಗಳು ವಶಕ್ಕೆ ಪಡೆದು, ಅಡಿಕೆಯನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿರುವ ಗಂಭೀರ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಮುಖ್ಯಮಂತ್ರಿಗಳ ಮೂಲಕ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭರವಸೆ ನೀಡಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, “ನಮ್ಮ ಜಿಲ್ಲೆಯಿಂದ ಹೋದ 70 ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದ ಅಧಿಕಾರಿಗಳು ತಡೆಹಿಡಿದು, ಅಡಿಕೆಯಲ್ಲಿ ತಂಬಾಕು ಪದಾರ್ಥವಿದೆ ಎಂಬ ನೆಪವೊಡ್ಡಿ ಅದನ್ನು ನಾಶಪಡಿಸುವ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ಆದರೆ, ಈ ರೀತಿ ಕಾನೂನುಬಾಹಿರವಾಗಿ ಅಡಿಕೆಯನ್ನು ನಾಶಪಡಿಸಲು ಯಾರಿಗೂ ಸಾಧ್ಯವಿಲ್ಲ. ಅಲ್ಲಿನ ಅಧಿಕಾರಿಗಳು ಲಂಚಕ್ಕೋಸ್ಕರ ಈ ರೀತಿ ದಬ್ಬಾಳಿಕೆ ನಡೆಸುತ್ತಿರಬಹುದು ಅಥವಾ ಇದು ತೆರಿಗೆಗೆ (Tax) ಸಂಬಂಧಿಸಿದ ಗೊಂದಲವಾಗಿರಬಹುದು” ಎಂದು ಶಾಸಕರು ಶಂಕೆ ವ್ಯಕ್ತಪಡಿಸಿದರು.
ಆದರೆ, ಇದುವರೆಗೆ ಯಾವುದೇ ವ್ಯಾಪಾರಿಗಳಾಗಲಿ ಅಥವಾ ಲಾರಿ ಮಾಲೀಕರಾಗಲಿ ಸೂಕ್ತ ದಾಖಲೆಗಳೊಂದಿಗೆ ನನ್ನನ್ನು ಅಧಿಕೃತವಾಗಿ ಸಂಪರ್ಕಿಸಿಲ್ಲ. ಬಾಧಿತ ವ್ಯಾಪಾರಿಗಳು ದಾಖಲೆಗಳನ್ನು ನೀಡಿ ಮಾಹಿತಿ ನೀಡಿದರೆ ತಕ್ಷಣ, ನಾನು ವೈಯಕ್ತಿಕವಾಗಿ ವ್ಯಾಪಾರಿಗಳನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುತ್ತೇನೆ. ಕರ್ನಾಟಕ ಸಿಎಂ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಉನ್ನತ ಮಟ್ಟದ ಮಾತುಕತೆ ನಡೆಸಿ, ಲಾರಿಗಳ ಬಿಡುಗಡೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು” ಎಂದು ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದರು.







