ಸಮಗ್ರ ನ್ಯೂಸ್: ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗೆ ಮುಂದಾಗಿದೆ. ಅಂತ್ಯೋದಯ ಅನ್ನ ಯೋಜನೆ ಕಾರ್ಡ್ದಾರರಿಗೆ ನೀಡಲಾಗುತ್ತಿರುವ ರೇಷನ್ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಇನ್ನು ಮುಂದೆ ಕುಟುಂಬದ ಆಧಾರದ ಬದಲಿಗೆ, ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿ ಅಥವಾ ಗೋಧಿ ನೀಡುವ ಹೊಸ ನಿಯಮ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಇದುವರೆಗೆ ಅಂತ್ಯೋದಯ ಅನ್ನ ಯೋಜನೆಯಡಿ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದರೂ ತಿಂಗಳಿಗೆ 35 ಕೆಜಿ ಉಚಿತ ರೇಷನ್ ನೀಡಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ, ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 7 ಕೆಜಿ ರೇಷನ್ ನೀಡಲಾಗುತ್ತದೆ. ಉದಾಹರಣೆಗೆ: 2 ಸದಸ್ಯರಿದ್ದರೆ – 14 ಕೆಜಿ 3 ಸದಸ್ಯರಿದ್ದರೆ – 21 ಕೆಜಿ 4 ಸದಸ್ಯರಿದ್ದರೆ – 28 ಕೆಜಿ 5 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ – ಗರಿಷ್ಠ 35 ಕೆಜಿ ಅಂದರೆ, ಗರಿಷ್ಠ ಮಿತಿ 35 ಕೆಜಿಯೇ ಮುಂದುವರಿಯಲಿದ್ದು, ಸಣ್ಣ ಕುಟುಂಬಗಳಿಗೆ ಸಿಗುವ ರೇಷನ್ ಪ್ರಮಾಣದಲ್ಲಿ ಬದಲಾವಣೆ ಆಗಲಿದೆ. ಸಾಮಾನ್ಯ ರೇಷನ್ ಕಾರ್ಡ್ಗಳಿಗೆ ಏನು? ಸಾಮಾನ್ಯ ರೇಷನ್ ಕಾರ್ಡ್ ಹೊಂದಿರುವವರಿಗೆ ಯಾವುದೇ ಬದಲಾವಣೆ ಇರುವುದಿಲ್ಲ. ಅವರಿಗೆ ಹಿಂದಿನಂತೆ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯ ವಿತರಣೆ ಮುಂದುವರಿಯಲಿದೆ.
ಈ ಹೊಸ ನಿಯಮವು ಕೇಂದ್ರ ಸರ್ಕಾರದ ಅಂತ್ಯೋದಯ ಅನ್ನ ಯೋಜನೆ (AAY) ಅಡಿಯಲ್ಲಿ ಇರುವ ರೇಷನ್ ಕಾರ್ಡ್ದಾರರಿಗೆ ಮಾತ್ರ ಅನ್ವಯವಾಗಲಿದೆ. ಸರ್ಕಾರದ ಉದ್ದೇಶ ಕುಟುಂಬದ ಗಾತ್ರದ ಆಧಾರದ ಬದಲಿಗೆ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಸಮಾನ ಪ್ರಮಾಣದಲ್ಲಿ ಆಹಾರ ಧಾನ್ಯ ವಿತರಿಸುವುದು ಹಾಗೂ ಆಹಾರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ತಿದ್ದುಪಡಿಯನ್ನು ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ.






