ಸಮಗ್ರ ನ್ಯೂಸ್: 2015ರ ಕರ್ನಾಟಕ ರಣಜಿ ತಂಡದ ಆಟಗಾರ ಶಿವಮೊಗ್ಗ ಮೂಲದ ಅಕ್ಷಯ್ ಎಸ್.ಎಲ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ಕ್ಲಬ್ನ ಆಟಗಾರರಾಗಿದ್ದ ಅಕ್ಷಯ್ ಮಧ್ಯಮ ವೇಗದ ಬೌಲರ್ ಹಾಗೂ ಉತ್ತಮ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಸದ್ಯ ಕರ್ನಾಟಕ ಅಂಡರ್-19 ಕ್ರಿಕೆಟ್ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
KSCA ಲೀಗ್ ಪಂದ್ಯಾವಳಿ ವೇಳೆ ಹೃದಯಾಘಾತ ಸಂಭವಿಸಿದೆ. ಬೆಂಗಳೂರಿನ ಎಸ್ ಎಲ್ ಎಸ್ ಕ್ರೀಡಾಂಗಣದಲ್ಲಿ KSCA nassur memorial shield ಏಕದಿನ ಲೀಗ್ ಪಂದ್ಯಾವಳಿ ನಡೆಯುತ್ತಿತ್ತು. ಈ ವೇಳೆ ದುರಂತ ಸಂಭವಿಸಿದೆ.
KSCA 3rd ಡಿವಿಸನ್ ಲೀಗ್ ಪಂದ್ಯವಾಡುತ್ತಿದ್ದಾಗ ಅಕ್ಷಯ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ನಾಲ್ಕು ಓವರ್ ಬೌಲಿಂಗ್ ಮಾಡಿ ಆರೋಗ್ಯ ಸಮಸ್ಯೆ ಎಂದು ಅಕ್ಷಯ್ ಹೊರಬಂದಿದ್ದರು. ಬಳಿಕ ನೀರು ಕುಡಿಯುತ್ತಿದ್ದಂತೆಯೇ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದರು.
ಇಂದು ನಡೆಯುತ್ತಿದ್ದ ಪಂದ್ಯದಲ್ಲಿ ಅಕ್ಷಯ್ 4 ಓವರ್ ಬೌಲಿಂಗ್ ಮಾಡಿ ಕೇವಲ 19 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಇನ್ನು ಅಕ್ಷಯ್ ಕರ್ನಾಟಕ ಪರ 6 ರಣಜಿ, 3 ಏಕದಿನ ಪಂದ್ಯಗಳನ್ನಾಡಿದ್ದರು.
ತಕ್ಷಣವೇ ಅಕ್ಷಯ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇದೀಗ ಅವಲಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ಮೃತದೇಹವನ್ನು ಇಡಲಾಗಿದೆ. ಅಕ್ಷಯ್ ನಿಧನಕ್ಕೆ ಕರ್ನಾಟಕ ಕ್ರಿಕೆಟ್ ವಲಯ ಕಂಬನಿ ಮಿಡಿದಿದೆ.







