ಸಮಗ್ರ ನ್ಯೂಸ್: ಇಲಿಯನ್ನು ಬೇಟೆಯಾಡಲು ಹೋಗಿ ಹಾವೊಂದು ಕಾರಿನ ಇಂಜಿನ್ ಅಡಿಭಾಗದ ರಂಧ್ರದಲ್ಲಿ ಸಿಲುಕಿಕೊಂಡ ಅಪರೂಪದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ. ಕೊನೆಗೆ ಉರಗತಜ್ಞರ ಸಕಾಲಿಕ ಭೇಟಿ ಹಾಗೂ ಹರಸಾಹಸದಿಂದ ಹಾವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಪುತ್ತೂರು ನಗರದ ನಿವಾಸಿಯೊಬ್ಬರು ತಮ್ಮ ಕಾರನ್ನು ಎಂದಿನಂತೆ ಮನೆಯ ಶೆಡ್ನಲ್ಲಿ ನಿಲ್ಲಿಸಿದ್ದರು.
ಈ ಸಂದರ್ಭದಲ್ಲಿ ಕಾರಿನ ಬಳಿ ಬಂದ ಇಲಿಯನ್ನು ಬೆನ್ನಟ್ಟಿದ ಹಾವೊಂದು, ಕಾರಿನ ಅಡಿಭಾಗದಲ್ಲಿದ್ದ ಸಣ್ಣ ರಂಧ್ರದ ಮೂಲಕ ಒಳನುಗ್ಗಿದೆ. ಒಳಗೆ ನುಗ್ಗಿ ಇಲಿಯನ್ನು ಹಿಡಿದ ಹಾವಿಗೆ, ತಿಂದ ಬಳಿಕ ಮೈ ದಪ್ಪಗಾದ ಕಾರಣ ಅದೇ ರಂಧ್ರದಿಂದ ಮರಳಿ ಹೊರಬರಲು ಸಾಧ್ಯವಾಗಿಲ್ಲ.ಈ ಯಾವುದೇ ವಿಚಾರ ತಿಳಿಯದ ಕಾರಿನ ಮಾಲೀಕರು, ಎಂದಿನಂತೆ ಕಾರನ್ನು ಚಲಾಯಿಸಿಕೊಂಡು ಪುತ್ತೂರು ಪೇಟೆಗೆ ಬಂದಿದ್ದಾರೆ. ಪೇಟೆಯಲ್ಲಿ ಕಾರನ್ನು ಪಾರ್ಕ್ ಮಾಡಿದಾಗ, ಕಾರಿನ ಅಡಿಭಾಗದಲ್ಲಿ ಹಾವಿನ ಚಲನವಲನ ಇರುವುದನ್ನು ಸ್ಥಳೀಯರೊಬ್ಬರು ಗಮನಿಸಿ ಮಾಲೀಕರಿಗೆ ತಿಳಿಸಿದ್ದಾರೆ.
ತಕ್ಷಣವೇ ಸಾರ್ವಜನಿಕರು ಸೇರಿ ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದರೂ, ಅದು ರಂಧ್ರದಲ್ಲಿ ಗಟ್ಟಿಯಾಗಿ ಸಿಲುಕಿಕೊಂಡಿದ್ದರಿಂದ ಹೊರಬರಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಉರಗತಜ್ಞರು ಕಾರಿನ ಅಡಿಭಾಗದ ಬಿಡಿಭಾಗಗಳನ್ನು ಗಮನಿಸಿ, ಹಾವಿಗೆ ಯಾವುದೇ ಗಾಯವಾಗದಂತೆ ಅತ್ಯಂತ ಜಾಗರೂಕತೆಯಿಂದ ಹಾಗೂ ಹರಸಾಹಸ ಪಟ್ಟು ಹಾವನ್ನು ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ. ಕಾರಿನೊಳಗಿದ್ದ ಹಾವನ್ನು ನೋಡಲು ಪೇಟೆಯಲ್ಲಿ ಕೆಲಕಾಲ ಸಾರ್ವಜನಿಕರು ಮುಗಿಬಿದ್ದಿದ್ದರು.







