ಸಮಗ್ರ ನ್ಯೂಸ್: ಬಸ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತಗೊಂಡರೂ ಬಸ್ಸಿನಲ್ಲಿದ್ದ 24 ಮಂದಿ ಪ್ರಯಾಣಿಕರ ಜೀವ ಉಳಿಸಲು ಹೋರಾಡಿದ ಚಾಲಕನೊಬ್ಬನ ಸಾಹಸಗಾಥೆ ಮಡಿಕೇರಿ ಸಮೀಪದ ಕಾಟಿಕೇರಿಯಲ್ಲಿ ನಡೆದಿದೆ. ಹೃದಯಾಘಾತಕ್ಕೆ ಒಳಗಾದ ಚಾಲಕ, ಅಂತಿಮ ಕ್ಷಣದಲ್ಲಿ ಬಸ್ಸನ್ನು ಸುರಕ್ಷಿತವಾಗಿ ಬರೆಗೆ (ಗುಡ್ಡದ ಗೋಡೆ) ಗುದ್ದಿಸಿ ನಿಲ್ಲಿಸುವ ಮೂಲಕ ಭೀಕರ ದುರಂತವೊಂದನ್ನು ತಪ್ಪಿಸಿದ್ದಾರೆ.
ಬೆಂಗಳೂರಿನಿಂದ ಸುಳ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ‘ಪೂರ್ಣಿಮ’ ಎಂಬ ಖಾಸಗಿ ಬಸ್ ಗುರುವಾರ ರಾತ್ರಿ ಬೆಂಗಳೂರಿನಿಂದ ಹೊರಟಿತ್ತು. ಇಂದು ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಬಸ್ ಮಡಿಕೇರಿ ದಾಟಿ ಕಾಟಿಕೇರಿ ಬಳಿಯ ತಿರುವಿನಲ್ಲಿ ಬರುತ್ತಿದ್ದಾಗ, ಚಾಲಕ ಶಿವಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿದೆ.
ಹೃದಯಾಘಾತದ ತೀವ್ರ ನೋವಿನ ನಡುವೆಯೂ ಎದೆಗುಂದದ ಶಿವಕುಮಾರ್, ಬಸ್ ಕಂದಕಕ್ಕೋ ಅಥವಾ ಬೇರೆ ವಾಹನಕ್ಕೋ ಡಿಕ್ಕಿ ಹೊಡೆಯದಂತೆ ಎಚ್ಚರಿಕೆ ವಹಿಸಿದರು. ಬಸ್ ನಿಯಂತ್ರಣ ತಪ್ಪುತ್ತಿದೆ ಎಂದು ಅರಿವಾದ ತಕ್ಷಣ, ಸಮಯಪ್ರಜ್ಞೆ ಮೆರೆದ ಅವರು ಬಸ್ಸನ್ನು ರಸ್ತೆಯ ಪಕ್ಕದಲ್ಲಿದ್ದ ಬರೆಗೆ (ಗುಡ್ಡಕ್ಕೆ) ಒರಗಿಸಿ ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಬಸ್ಸಿನಲ್ಲಿದ್ದ 24 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಶಿವಕುಮಾರ್ ಅವರು ಕುಳಿತ ಸೀಟಿನಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಪ್ರಯಾಣಿಕರ ಜೀವ ಉಳಿಸಲು ಅವರು ನಡೆಸಿದ ಕೊನೆಯ ಪ್ರಯತ್ನ ಯಶಸ್ವಿಯಾದರೂ, ವಿಧಿಯಾಟಕ್ಕೆ ಅವರು ಬಲಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಪೊಲೀಸರು, ತಕ್ಷಣವೇ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಚಾಲಕನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಆದರೆ ಚಾಲಕ ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.






