ಸಮಗ್ರ ನ್ಯೂಸ್: ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಪುತ್ತೂರು ಬೆಡಿ’ ಎಂದೇ ಖ್ಯಾತಿಯಾದ ಸಿಡಿಮದ್ದು ಪ್ರದರ್ಶನ, ವಿಜೃಂಭಣೆಯ ಬ್ರಹ್ಮರಥೋತ್ಸವ ಏ.17ರಂದು ರಾತ್ರಿ ನಡೆಯಲಿದೆ.
17ರಂದು ಬೆಳಿಗ್ಗೆ ಉತ್ಸವ, ವಸಂತಕಟ್ಟೆ ಪೂಜೆ, ಬಳಿಕ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ಸಂಜೆ 7.30ಕ್ಕೆ ಉತ್ಸವ ನಡೆದು, ಬಳಿಕ ದೇವರ ರಥಾರೂಢ ಕಾರ್ಯಕ್ರಮ ನಡೆಯಲಿದೆ. ಬಳಿಕ ಪುತ್ತೂರು ಬೆಡಿ ನಡೆಯಲಿದೆ.
ಈ ಬಾರಿ ಕಳೆದ ವರ್ಷದಂತೆ ಭಕ್ತರಿಂದಲೇ ಸಿಡಿಮದ್ದು ಪ್ರದರ್ಶನ ನಡೆಯಲಿದ್ದು, ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸುವ ಹಲವು ಬಗೆಯ ಚಿತ್ತಾಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ. ಬ್ರಹ್ಮರಥೋತ್ಸವದ ಬಳಿಕ ಬಂಗಾರ್ ಕಾಯರ್ಕಟ್ಟೆ ಸವಾರಿ, ದಂಡನಾಯಕ-ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಭೂತಬಲಿ ನಡೆಯಲಿದೆ.
ಪುತ್ತೂರು ಪೇಟೆ ಹಾಗೂ ಜಾತ್ರಾ ಗದ್ದೆಯಲ್ಲಿ ಜನಸ್ತೋಮ ಸೇರಲಿರುವ ಕಾರಣ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಪರ್ಯಾಯ ಮಾರ್ಗ ಸೂಚಿ ನೀಡಲಾಗಿದೆ. ಬೇರೆ ಬೇರೆ ಕಡೆಗಳಿಂದ ಬರುವ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ನಿಲುಗಡೆ ಸ್ಥಳ ಸೂಚಿಸಲಾಗಿದ್ದು, ಪೊಲೀಸ್ ಇಲಾಖೆ ಬಿಗು ಬಂದೋಬಸ್ತ್ ಏರ್ಪಡಿಸಿದೆ.






