ಸಮಗ್ರ ನ್ಯೂಸ್: ಜೂಜಿನ ನೆಪವೊಡ್ಡಿ ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರು ಈ ಬಾರಿ ಯಾವುದೇ ಸಾಂಪ್ರದಾಯಿಕ ಕೋಳಿ ಅಂಕಗಳನ್ನು ನಡೆಸದಂತೆ ತಡೆದಿದ್ದು, ಇದೀಗ ಸಾಂಪ್ರದಾಯಿಕ ಕೋಳಿ ಅಂಕ ಉಳಿಸುವ ನಿಟ್ಟಿನಲ್ಲಿ ಹೋರಾಟಗಾರರು ಮುಂದಾಗಿದ್ದು, ಫೆಬ್ರವರಿ 1 ರಂದು ಪುತ್ತೂರಿನಲ್ಲಿ ಬೃಹತ್ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.
ದಕ್ಷಿಣಕನ್ನಡ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಕೋಳಿ ಅಂಕಕ್ಕೆ ತಡೆ ಒಡ್ಡುತ್ತಿರುವ ಸರಕಾರ ಮತ್ತು ಪೊಲೀಸ ಇಲಾಖೆ ವಿರುದ್ದ ಇದೀಗ ಹೋರಾಟಕ್ಕೆ ಮುಂದಾಗಿದೆ. ಈ ಹಿನ್ನಲೆ ಫೆಬ್ರವರಿ 1ರಂದು ಪುತ್ತೂರಿನಲ್ಲಿ ‘ಕೋಳಿ ಅಂಕ’ಕ್ಕಾಗಿ ಕೊಟೇಚಾ ಹಾಲ್ ನಲ್ಲಿ ಬೃಹತ್ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ಸಭೆಯಲ್ಲಿ ಕೋಳಿ ಅಂಕ ಅಭಿಮಾನಿಗಳು ಹಾಗೂ ದೈವಾರಾಧನೆಗೆ ಸಂಬಂಧಪಟ್ಟವರು ಭಾಗವಹಿಸಲಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಸರ್ಕಾರಕ್ಕೆ ಕೋಳಿ ಅಂಕದ ಬಗ್ಗೆ ಸರಿಯಾದ ಮಾಹಿತಿ ನೀಡಲು ಹಾಗೂ ಜಾತ್ರೆ, ನೇಮೋತ್ಸವದ ಬಳಿಕ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಇರುವ ಇತಿಹಾಸವನ್ನು ಸರಕಾರ ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಸಭೆಯನ್ನು ಕರೆಯಲಾಗಿದ್ದು, ಕರಾವಳಿಯಲ್ಲಿ ದೈವ, ದೇವರ ಆಚಾರ ವಿಚಾರದಲ್ಲಿ ಪ್ರಾಚೀನ ಸಂಪ್ರದಾಯಗಳು ಇವೆ, ಇದರಲ್ಲಿ ಕೋಳಿ ಅಂಕವೂ ಪ್ರಾಚೀನ ಸಂಪ್ರದಾಯವಾಗಿದ್ದು, ಇದನ್ನ ಉಳಿಸಿ ಬೆಳೆಸುವಲ್ಲಿ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಹುಟ್ಟಿಕೊಂಡಿದೆ .ಕೋಳಿ ಅಂಕವನ್ನ ಮತ್ತೆ ಕರಾವಳಿಯಲ್ಲಿ ಮುಂದುವರಿಸುವಂತೆ ಹೋರಾಟ ನಡೆಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.






