ಸಮಗ್ರ ನ್ಯೂಸ್: ನಿತ್ಯ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿರುವ ಅಯೋಧ್ಯೆಯ ಐತಿಹಾಸಿಕ ರಾಮಮಂದಿರದ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸೋಮವಾರ ಘೋಷಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ನೀಡಿರುವ ಟ್ರಸ್ಟ್, ‘ಪ್ರಭು ಶ್ರೀರಾಮನ ಎಲ್ಲಾ ಭಕ್ತರಿಗೆ ಮಂದಿರ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿವೆ ಎಂದು ತಿಳಿಸಲು ಸಂತೋಷಪಡುತ್ತೇವೆ. ಇದರಲ್ಲಿ ಮುಖ್ಯಮಂದಿರ ಮತ್ತು ಆವರಣದೊಳಗಿನ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಭಗವತಿ ಮತ್ತು ಅನ್ನಪೂರ್ಣ ದೇವರ 6 ಮಂದಿರಗಳು ಸೇರಿವೆ. ಜೊತೆಗೆ ಶೇಷಾವತಾರ ಮಂದಿರವೂ ಪೂರ್ಣಗೊಂಡಿದೆ. ಈ ಮಂದಿರಗಳ ಮೇಲೆ ಧ್ವಜ ಮತ್ತು ಕಲಶವನ್ನು ಸ್ಥಾಪಿಸಲಾಗಿದೆ’ ಎಂದು ತಿಳಿಸಿದೆ.
ಇದರ ಜೊತೆಗೆ ಋಷಿಗಳಾದ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ಸಂತ ತುಳಸೀದಾಸ ಹಾಗೂ ನಿಷಾದರಾಜ, ಶಬರಿ, ದೇವಿ ಅಹಲ್ಯೆಯ ಮಂಟಪಗಳನ್ನು ನಿರ್ಮಿಸಲಾಗಿದೆ. ಜಟಾಯು ಮತ್ತು ಅಳಿಲಿನ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ರಸ್ತೆ ನಿರ್ಮಾಣ ಮತ್ತು ಕಲ್ಲಿನ ನೆಲಹಾಸು ಕೆಲಸವನ್ನು ಎಲ್&ಟಿ ಸಂಸ್ಥೆ ನಿರ್ವಹಿಸುತ್ತಿದ್ದರೆ, 10 ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಪಂಚವಟಿಯ ಅಭಿವೃದ್ಧಿಯನ್ನು ಜಿಎಂಆರ್ ಕಾರ್ಯಗತಗೊಳಿಸುತ್ತಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.







