ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ಗೆ ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. 24ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನಟ ದರ್ಶನ್ನನ್ನು ಬಳ್ಳಾರಿ ಜೈಲಿನಿಂದ, ಪವಿತ್ರಾಗೌಡ ಮತ್ತಿತರನ್ನು ಪರಪ್ಪನ ಅಗ್ರಹಾರದಿಂದ ಹಾಗೂ ಮೈಸೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರುಗಿ, ವಿಜಯಪುರದ ಜೈಲಿನಿಂದ ಒಟ್ಟು 17 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಇದೀಗ ಸೆ.12ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿರುವುದರಿಂದ ದರ್ಶನ್ ಗ್ಯಾಂಗ್ಗೆ ಸೆರೆವಾಸ ಮುಂದುವರಿದಿದೆ.
ನಟ ದರ್ಶನ್ ಗ್ಯಾಂಗ್ನ ನ್ಯಾಯಾಂಗ ಬಂಧನ ಸೆ.9ರಂದು ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಎಲ್ಲ ಆರೋಪಿಗಳ ಹಾಜರಾತಿ ಪಡೆದುಕೊಂಡರು. ಈ ವೇಳೆ ಚಾರ್ಜ್ ಶೀಟ್ ನೀಡಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದರು.
ಆರೋಪಿಗಳ ಪರ ವಕೀಲರಿಗೆ ವೈಯಕ್ತಿಕವಾಗಿ ಚಾರ್ಜ್ ಶೀಟ್ ನೀಡಿ ಎಂದು ನ್ಯಾಯಾಧೀಶರು ಸೂಚನೆ ನೀಡಿದರು. ಆರೋಪಿಗಳು ಒಂದೊಂದು ಜೈಲಿನಲ್ಲಿದ್ದಾರೆ, ಹೀಗಾಗಿ ಆರೋಪಿಗಳ ಕೈಗೆ ಚಾರ್ಜ್ ಶೀಟ್ ಸಲ್ಲಿಸಿದರೆ ಜಾಮೀನು ಪ್ರಕ್ರಿಯೆಗೆ ತಡವಾಗುತ್ತದೆ. ಆರೋಪಿಗಳು ವಿಡಿಯೋ ಕಾನ್ಪರೆನ್ಸ್ನಲ್ಲಿದ್ದಾರೆ. ಅವರನ್ನು ಕೇಳಿ ಅವರ ಸೂಚನೆ ಮೇರೆಗೆ ಚಾರ್ಜ್ ಶೀಟ್ ನೀಡುವಂತೆ ವಕೀಲರು ಮನವಿ ಮಾಡಿದರು.






