ಪಟ್ಲ ಬೆಟ್ಟಕ್ಕೆ ರಸ್ತೆ ನಿರ್ಮಿಸಿದ್ಯಾರು? | ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಚಿವ ಈಶ್ವರ ಖಂಡ್ರೆ ಆದೇಶ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಬಿಸಿಲೆ ಘಾಟ್ ನ ಪಟ್ಲ ಬೆಟ್ಟದಲ್ಲಿ ಇತ್ತಿಚೆಗೆ ಪ್ರವಾಸಿ ಬೈಕರ್ಸ್ ಮೇಲೆ ಸ್ಥಳೀಯ ಜೀಪು ಚಾಲಕರು ನಡೆಸಿದ ಹಲ್ಲೆಯ ನಂತರ ಮಹತ್ವದ ಬೆಳವಣಿಗೆ ನಡೆದಿದ್ದು, ಸ್ಥಳೀಯ ವ್ಯಕ್ತಿಗಳಿಗೆ ಬಿಸಿ‌ ಮುಟ್ಟುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿದೆ.

. Ad Widget . Ad Widget

ಕಳೆದ ವಾರ ಘಟನೆ ನಡೆದಿದ್ದು, ಮಾಧ್ಯಮಗಳ ವರದಿ ಆಧರಿಸಿ ಕರ್ನಾಟಕ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ 3 ದಿನಗಳಲ್ಲಿ ಘಟನೆ ಕುರಿತ ಸಂಪೂರ್ಣ‌ವರದಿ ಒಪ್ಪಿಸುವಂತೆ ಆದೇಶ ಹೊರಡಿಸಿದ್ದಾರೆ.

. Ad Widget . . Ad Widget . Ad Widget

ಸಚಿವರ ಆದೇಶದಲ್ಲಿ ಏನಿದೆ..?
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಬಿಸಲೆ ಅರಣ್ಯ ವ್ಯಾಪ್ತಿಯ ಪಟ್ಲ ಬೆಟ್ಟಕ್ಕೆ ಬೈಕ್ ನಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯಲ್ಲಿ ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೆ ವಾಹನ ಓಡಾಟಕ್ಕೆ ಖಾಸಗಿಯಾಗಿ ರಸ್ತೆ ನಿರ್ಮಿಸಲಾಗಿದೆ, ರಸ್ತೆಗಾಗಿ ಅನಧಿಕೃತವಾಗಿ ಮರ ಕಡಿಯಲಾಗಿದೆ ಎಂದೂ ಉಲ್ಲೇಖಿಸಲಾಗಿದೆ.

ಪಟ್ಟ ಬೆಟ್ಟಕ್ಕೆ ನಿರ್ಮಿಸಲಾಗಿರುವ ರಸ್ತೆ ಅಧಿಕೃತವೇ?, ನಿಯಮಾನುಸಾರ ಫಾರೆಸ್ಟ್ ಕ್ಲಿಯರೆನ್ಸ್ ಪಡೆಯಲಾಗಿದೆಯೇ? ಇಲ್ಲಿ ರಸ್ತೆ ನಿರ್ಮಾಣಕ್ಕೆ ಮರ ಕಡಿಯಲು ಅನುಮತಿ ಪಡೆಯಲಾಗಿತ್ತೋ ಇಲ್ಲವೋ ಎಂಬ ಸ್ಥಳಕ್ಕೆ ಭೇಟಿ ನೀಡಿ, 3 ದಿನಗಳ ಒಳಗಾಗಿ ವರದಿ ನೀಡುವಂತೆ ಮತ್ತು ಒಂದೊಮ್ಮೆ ಅನುಮತಿ ಇಲ್ಲದೆ ರಸ್ತೆ ನಿರ್ಮಿಸಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಮತ್ತು ಕರ್ತವ್ಯ ಲೋಪ ಎಸಗಿರುವ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ನಿರ್ದೇಶಿಸಲು ಈ ಮೂಲಕ ಸೂಚಿಸಲಾಗಿದೆ.

ಏನಿದು ಘಟನೆ?
ಕಳೆದ ವಾರಾಂತ್ಯದಲ್ಲಿ ಪಟ್ಲ ಬೆಟ್ಟಕ್ಕೆ ಮಂಗಳೂರು ಮೂಲದ ಯುವಕರ ತಂಡ ಬೈಕ್ ನಲ್ಲಿ‌ ಹೋಗಿ ಭೇಟಿ ನೀಡಿದ್ದು, ಹಿಂತಿರುಗಿ ಬರುವಾಗ ಸ್ಥಳೀಯ ಜೀಪ್ ಚಾಲಕರು ಹಲ್ಲೆ‌ ನಡೆಸಿದ್ದರು. ಸ್ಥಳೀಯ ವಾಹನದಲ್ಲಷ್ಟೇ ಬೆಟ್ಟಕ್ಕೆ ತೆರಳಬೇಕೆಂದು ಅವರು ತಿಳಿಸಿ, ಬಳಿಕ ಪಂಚಾಯತ್ ‌ಮೂಲಕವೂ ಸೂಚನಾ ಫಲಕ ಅಳವಡಿಕೆ‌ ಮಾಡಲಾಗಿತ್ತು. ಈ ಕುರಿತಂತೆ ಮಾಧ್ಯಮಗಳು ವರದಿ ಬಿತ್ತರಿಸಿದ್ದು, ಜೊತೆಗೆ ಹಲ್ಲೆಕೋರರ ಮೇಲೆ‌ ಕ್ರಮ ತೆಗೆದುಕೊಳ್ಳಲು ಯುವಕರು ವನಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಬಂಧನವಾಗಿತ್ತು.

Leave a Comment

Your email address will not be published. Required fields are marked *