ಸಮಗ್ರ ನ್ಯೂಸ್ : ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಕಾಂಗ್ರೆಸ್ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯ ಕಾಂಗ್ರೆಸ್ನ ಕೆಲಸ ನಮ್ಮ ಕೈಹಿಡಿಯಲಿದೆ. ಜನ ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ನನ್ನ ಗೆಲುವು ಖಚಿತ ಎಂದು ಹೇಳಿದರು.
ನನಗೆ ಪೂರ್ತಿ ಜಿಲ್ಲೆ ಗೊತ್ತಿಲ್ಲ ಎನ್ನುವ ಸಂಸದ ರಮೇಶ ಜಿಗಜಿಣಗಿಯವರಿಗೆ ಏನು ಹೇಳಬೇಕು. ನಾನು ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಇಡೀ ಜಿಲ್ಲೆ ಪರಿಚಿತನಿದ್ದೇನೆ. ಎರಡು ಸಲ ಶಾಸಕನಾಗಿದ್ದೇನೆ. ನನಗೆ ರಾಜಕೀಯದ ಇತಿಹಾಸವಿದೆ, ದುಡಿದಿದ್ದೇನೆ. ಆದರೆ, ಚಿರಪರಿಚಿತರಾಗಿರುವ ಜಿಗಜಿಣಗಿಯವರ ಮುಖವನ್ನೇ ಜನರು ಮರೆತಿದ್ದಾರಲ್ಲ, ಯಾಕೆಂದರೆ ಇವರು ಯಾರಿಗೆ ಮುಖ ತೋರಿಸಿದ್ದಾರೆ ಹೇಳಿ ಎಂದು ವ್ಯಂಗ್ಯವಾಡಿದರು.
ಯಾರು ಏನೇ ಮಾತಾಡಿದರೂ ಮತದಾರರಿಗೆ ಕಾಂಗ್ರೆಸ್ ಪಕ್ಷ ಜನಾನುರಾಗಿ ಅಂತ ಗೊತ್ತಾಗಿದೆ. ಅಭಿವೃದ್ಧಿ ಮಂತ್ರವಾಗಿಸಿಕೊಂಡು ಅವರ ಮುಂದೆ ನಾನೀಗ ನಿತಿದ್ದೇನೆ. ಗೆಲುವು ಆಗೇ ಆಗುತ್ತದೆ, ಜನರ ಪ್ರತಿಕ್ರಿಯೆ-ಉತ್ಸಾಹದಿಂದ ಈ ಮಾತು ಹೇಳುತ್ತಿರುವೆ. ಗೆದ್ದರೆ ಅವರ ಋಣ ತೀರಿಸುತ್ತೇನೆ ಎಂದು ಹೇಳಿದರು.
15ಕ್ಕೆ ಮತ್ತೆ ನಾಮಪತ್ರ
ಸಾವಿರಾರು ಸಂಖ್ಯೆಯ ಬೆಂಬಲಿಗರು, ಮುಖಂಡರು, ಪಕ್ಷದ ಕಾರ್ಯಕರ್ತರೊಂದಿಗೆ ಸೋಮವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ಆಲಗೂರ್ ತಿಳಿಸಿದರು. ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಸೇರಿದಂತೆ ಅನೇಕರು ಜತೆಗೆ ಇರಲಿದ್ದಾರೆ. ಜಿಲ್ಲೆಯ ಎಲ್ಲ ಕಡೆಯಿಂದ ಜನರು ಬರಲಿದ್ದಾರೆ ಎಂದರು.


















